ADVERTISEMENT

ಮೈಸೂರು: ಜಮೀರ್–‌ಸಿದ್ದರಾಮಯ್ಯ ಗೋಪ್ಯ ಮಾತುಕತೆ, ಮಾಧ್ಯಮದವರ ಮೇಲೆ ಗರಂ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 6:30 IST
Last Updated 21 ಜನವರಿ 2023, 6:30 IST
ಜಮೀರ್ ಅಹಮದ್ ಖಾನ್‌ ಮತ್ತು ಸಿದ್ದರಾಮಯ್ಯ
ಜಮೀರ್ ಅಹಮದ್ ಖಾನ್‌ ಮತ್ತು ಸಿದ್ದರಾಮಯ್ಯ   

ಮೈಸೂರು: ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಜಮೀರ್ ಅಹಮದ್ ಖಾನ್‌ ಇಲ್ಲಿನ ಬನ್ನಿಮಂಟಪದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ರಾತ್ರಿ ಗೋಪ್ಯ ಮಾತುಕತೆ ನಡೆಸಿದರು.

‘ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಂತೆ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಷಡ್ಯಂತ್ರ ಆರಂಭಿಸಿದ್ದಾರೆ’ ಎಂದು ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹೇಳಿಕೆ ಹಿನ್ನೆಲೆಯಲ್ಲಿ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಪ್ರತಿಕ್ರಿಯೆ ಪಡೆಯಲು ಬಂದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸಿದ್ದರಾಮಯ್ಯ ಗರಂ ಆದರು. ‘ಖಾಸಗಿ ಸಭೆಗಳಿಗೆಲ್ಲಾ ಬರುತ್ತೀರೇಕೆ. ತೆಲಂಗಾಣದ ಅಧ್ಯಕ್ಷರ ಹೇಳಿಕೆ ಬಗ್ಗೆ ಇಲ್ಲಿ ಯಾರೂ ಮಾತನಾಡುವುದಿಲ್ಲ. ನೀವೆಲ್ಲರೂ ಹೋಗಿ’ ಎಂದು ಹೊರ ಕಳುಹಿಸಿದರು.

ADVERTISEMENT

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಜಮೀರ್, ‘ನನಗಂತೂ ಯಾವುದೇ ಆಫರ್ ಬಂದಿಲ್ಲ. ನಾನು ಅಲ್ಲಿಗೆ ಹೋಗಿದ್ದು, ತೆಲಂಗಾಣ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದು ಸತ್ಯ. ಆದರೆ, ₹ 500 ಕೋಟಿ ಆಫರ್ ಅನ್ನು ಯಾರೂ ನನಗೆ ಕೊಟ್ಟಿಲ್ಲ. ಆ ಬಗ್ಗೆ ಗೊತ್ತೂ ಇಲ್ಲ. ಅಲ್ಲಿನ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ನನಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸಿದ್ದರು. ಅದು ಸೌಜನ್ಯದ ಭೇಟಿಯಾಗಿತ್ತು’ ಎಂದರು.

‘ನಮ್ಮ ಭೇಟಿಯಲ್ಲಿ ರಾಜಕೀಯದ ಚರ್ಚೆ ನಡೆದಿಲ್ಲ. ಅವರ ಪಕ್ಷವೇ ಬೇರೆ, ನಮ್ಮದೇ ಬೇರೆ. ₹ 500 ಕೋಟಿಯನ್ನು ಯಾರು ಪಡೆದಿದ್ದಾರೆ ಎನ್ನುವುದನ್ನು ಆರೋಪ ಮಾಡಿದವರನ್ನೇ ಕೇಳಿ. ನಾನು ಭೇಟಿಯಾದ ತಕ್ಷಣ ಏನೇನೋ ಹಬ್ಬಿಸುತ್ತಾರೆ. ಆರೋಪ ಮಾಡಿದವರು ನನ್ನ ಹೆಸರನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಹೀಗಾಗಿ ಯಾವುದೇ ಕ್ರಮದ ಬಗ್ಗೆ ಯೋಚಿಸಿಲ್ಲ. ನನ್ನ ಬಗ್ಗೆ ಮಾಧ್ಯಮದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆಯಷ್ಟೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.