ADVERTISEMENT

ಮೈಸೂರು–ಚಾಮರಾಜನಗರ ಕ್ಷೇತ್ರನಾಮಪತ್ರ ಪುರಸ್ಕೃತ; ಕಾಂಗ್ರೆಸ್‌ ನಿರಾಳ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 19:45 IST
Last Updated 25 ನವೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ವಿಧಾನ ಪರಿಷತ್‌ಗೆ ಚುನಾವಣೆಯಲ್ಲಿ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರ ನಾಮಪತ್ರ ಗುರುವಾರ ಪುರಸ್ಕೃತಗೊಂಡಿದೆ. ಪಕ್ಷದ ನಾಯಕರಲ್ಲಿ ನಿರಾಳ ಭಾವ ಮೂಡಿದೆ.

ತಿಮ್ಮಯ್ಯ ಅವರ ನಾಮಪತ್ರದಲ್ಲಿ ದೋಷವಿದೆ ಎಂದು ಬಿಜೆಪಿ ಅಭ್ಯರ್ಥಿ ಆರ್‌.ರಘು (ಕೌಟಿಲ್ಯ) ಬುಧವಾರ ಆಕ್ಷೇಪಣೆ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಗುರುವಾರ ಎರಡೂ ಕಡೆಯವರ ವಾದ ಪ್ರತಿವಾದ ಆಲಿಸಿ, ನಾಮಪತ್ರ ಕ್ರಮಬದ್ಧವಾಗಿರುವುದಾಗಿ ಪ್ರಕಟಿಸಿದರು.

‘ಬಿಜೆಪಿ ಅಭ್ಯರ್ಥಿಯ ಮೂರೂ ಆಕ್ಷೇಪಣೆಗಳನ್ನು ಚುನಾವಣಾಧಿಕಾರಿ ತಳ್ಳಿಹಾಕಿದ್ದಾರೆ. ಅಭ್ಯರ್ಥಿಯ ನಾಮಪತ್ರ ಅಂಗೀಕರಿಸಿದ್ದಾರೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪರ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಎ.ಎಸ್.‌ಪೊನ್ನಣ್ಣ ಹೇಳಿದರು.

ADVERTISEMENT

‘ಟೈಪಿಂಗ್ ವೇಳೆ ನಾಮಪತ್ರದಲ್ಲಿ ಸಣ್ಣ ಲೋಪವಾಗಿತ್ತು. ಆ ಬಗ್ಗೆ ವಕೀಲರು ಮನವರಿಕೆ ಮಾಡಿಕೊಟ್ಟರು. ನನ್ನ ನಾಮಪತ್ರ ಸ್ವೀಕೃತವಾಯಿತು. ಬಿಜೆಪಿಯವರು ಕೆಟ್ಟಮನಸ್ಸಿನವರು, ತಪ್ಪು ಹುಡುಕುವ ಕೆಲಸ ಮಾಡಿದ್ದಾರೆ’ ಎಂದು ತಿಮ್ಮಯ್ಯ ಪ್ರತಿಕ್ರಿಯಿಸಿದರು.

ಬಿಜೆಪಿ ಅಭ್ಯರ್ಥಿ ಆರ್‌.ರಘು ಅವರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆಯೇ ಚುನಾವಣೆಗೆ ಸ್ಪರ್ಧಿಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದರಿಂದ, ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ಲಕ್ಷ್ಮಣ ಅವರು ಚುನಾವಣಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.