ADVERTISEMENT

ಮೈಸೂರು: ಕಲಾಮಂದಿರದಲ್ಲಿ ಚಿತ್ರಕಲಾ ಲೋಕ!

ಶಿಬಿರಕ್ಕೆ ಶಾಸಕ ಎಲ್‌.ನಾಗೇಂದ್ರ ಚಾಲನೆ * 26ರಿಂದ ಅ.3ರ ವರೆಗೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 10:25 IST
Last Updated 23 ಸೆಪ್ಟೆಂಬರ್ 2022, 10:25 IST
ಮೈಸೂರಿನ ಕಲಮಂದಿರದ ಆವರಣದಲ್ಲಿ ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯು ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರಕ್ಕೆ ಶಾಸಕ ಎಲ್‌.ನಾಗೇಂದ್ರ ಚಿತ್ರ ಬರೆಯುವ ಮೂಲಕ ಚಾಲನೆ ನೀಡಿದರು. ಲಲಿತ ಕಲಾ ಅಕಾಡೆಮಿ ಸದಸ್ಯ ವಿನೋದ್‌ ಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಸಮಿತಿಯ ಉಪವಿಶೇಷಾಧಿಕಾರಿ ವಿಜಯಕುಮಾರ್‌, ಕಾರ್ಯಾಧ್ಯಕ್ಷ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು 
ಮೈಸೂರಿನ ಕಲಮಂದಿರದ ಆವರಣದಲ್ಲಿ ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯು ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರಕ್ಕೆ ಶಾಸಕ ಎಲ್‌.ನಾಗೇಂದ್ರ ಚಿತ್ರ ಬರೆಯುವ ಮೂಲಕ ಚಾಲನೆ ನೀಡಿದರು. ಲಲಿತ ಕಲಾ ಅಕಾಡೆಮಿ ಸದಸ್ಯ ವಿನೋದ್‌ ಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಸಮಿತಿಯ ಉಪವಿಶೇಷಾಧಿಕಾರಿ ವಿಜಯಕುಮಾರ್‌, ಕಾರ್ಯಾಧ್ಯಕ್ಷ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು    

ಮೈಸೂರು: ಒಂದೆಡೆ ಬಣ್ಣದ ರೇಖೆಗಳಲ್ಲಿ ಅರಳುತ್ತಿದ್ದ ಚಿತ್ರಪಟಗಳು, ಮತ್ತೊಂದೆಡೆ ಉಳಿ ಪೆಟ್ಟುಗಳಲ್ಲಿ ಮೂಡುತ್ತಿದ್ದ ಶಿಲ್ಪಗಳು‌, ಮೊಗದೊಂದು ಕಡೆ ಕಲಾವಿದರ ಕೈಚಳಕವನ್ನು ಅಚ್ಚರಿಯಿಂದ ನೋಡುತ್ತಿದ್ದ ಸಹೃದಯರು..

ಕಲಾಮಂದಿರದ ಅಂಗಳದಲ್ಲಿ ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯು ಆಯೋಜಿಸಿದ್ದ ರಾಜ್ಯ ಮಟ್ಟದ ಶಿಲ್ಪಕಲೆ ಹಗೂ ಚಿತ್ರಕಲಾ ಶಿಬಿರದಲ್ಲಿ ಶುಕ್ರವಾರ ಮೂಡಿದ ಚಿತ್ರಣವಿದು.

ರಾಜ್ಯದ ವಿವಿಧ ಭಾಗಗಳಿಂದ 15 ಮಂದಿ ಚಿತ್ರ ಕಲಾವಿದರು ಭಾಗವಹಿಸಿರುವ ಶಿಬಿರಕ್ಕೆ ಶಾಸಕ ಎಲ್‌.ನಾಗೇಂದ್ರ ಚಾಲನೆ ನೀಡಿದರು.

ADVERTISEMENT

ನಂತರ ಅವರು ಮಾತನಾಡಿ, ‘ಪಾರಂಪರಿಕ ಕಲೆಗಳನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಶಿಬಿರ ಏರ್ಪಡಿಸಲಾಗಿದೆ. ಸೆ.16ರಿಂದ ಆರಂಭವಾದ ಶಿಲ್ಪಕಲಾ ಶಿಬಿರದಲ್ಲಿ ಹತ್ತಾರು ಕಲಾಕೃತಿಗಳು ಅರಳಿವೆ. ಇದೀಗ ಚಿತ್ರಕಲಾ ಶಿಬಿರದಿಂದ ಉತ್ತಮ ಚಿತ್ರಗಳು ಮೂಡಿಬರಲಿವೆ’ ಎಂದು ಆಶಿಸಿದರು.

‘ದಸರಾ ದೀಪಾಲಂಕಾರ, ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತೆಯೇ ಶಿಬಿರದಲ್ಲಿ ಭಾಗವಹಿಸಿ ಕಲಾವಿದರ ಪ್ರತಿಭೆಯನ್ನು ನೋಡಬೇಕು. 26ರಿಂದ ಅ.3ರವರೆಗೆ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಶಿಬಿರದಲ್ಲಿ ರೂಪುಗೊಂಡ ಕಲೆಗಳ ವಸ್ತುಪ್ರದರ್ಶನವಿರಲಿದೆ’ ಎಂದರು.

‘ನಶಿಸಿ ಹೋಗುತ್ತಿರುವ ಕಲೆಗಳನ್ನು ಸಂರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಹಸ್ತ್‌ಶಿಲ್ಪ ವಿಕಾಸ್‌ ಯೋಜನಾ, ಮೆಗಾ ಕ್ಲಸ್ಟರ್‌ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರವೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ದಸರಾ ಉತ್ಸವ ಕಲೆಗಳಿಗೆ ಉತ್ತೇಜನ ನೀಡುವ ವೇದಿಕೆಯಾಗಿದೆ’ ಎಂದು ನುಡಿದರು.

ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ‘ಚಿತ್ರಕಲಾ ಶಿಬಿರದಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳು, ಪ್ರವಾಸಿ ತಾಣಗಳು ರಚನೆಯಾಗಲಿವೆ.ಸೆ.3ರ ನಂತರ ಇಲ್ಲಿ ರಚನೆಯಾದ ಕಲಾಕೃತಿಗಳ ಮಾರಾಟವೂ ನಡೆಯಲಿದ್ದು, ಕಲಾವಿದರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ’ ಎಂದರು.

ಲಲಿತ ಕಲಾ ಅಕಾಡೆಮಿ ಸದಸ್ಯ ವಿನೋದ್‌ ಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪಸಮಿತಿಯ ಉಪವಿಶೇಷಾಧಿಕಾರಿ ವಿಜಯಕುಮಾರ್‌, ಕಾರ್ಯಾಧ್ಯಕ್ಷ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.