ಮೈಸೂರು: ‘ನಾಡಹಬ್ಬ ದಸರಾ ಸಂದರ್ಭದಲ್ಲಿ ಜನರ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ನಾಡಹಬ್ಬದ ಸಂದರ್ಭದಲ್ಲಿ ಜನರ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ಸಿಗುವುದಿಲ್ಲ. ದಸರಾ ನೆಪ ಹೇಳುತ್ತಾರೆ. ಇದರಿಂದ ಜನರಿಗೆ ಬಹಳ ತೊಂದರೆ ಆಗುತ್ತಿದೆ ಎಂದು ಜನಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಈಚೆಗೆ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಹೇಳಿದ್ದಾರೆ. ಈ ದೂರು ಮರುಕಳಿಸದಂತೆ ನಿಗಾ ವಹಿಸಬೇಕು’ ಎಂದರು.
‘ಎಂದಿನಂತೆ ಎಲ್ಲ ಕೆಲಸಗಳೂ ಕಾಲಮಿತಿಯಲ್ಲೇ ನಡೆಯಬೇಕು’ ಎಂದು ತಿಳಿಸಿದರು.
‘ದಸರಾ ಉತ್ಸವ ನಿರ್ವಹಿಸುವುದು ಜಿಲ್ಲಾಡಳಿತ. ನಮ್ಮ ಕಚೇರಿಯಲ್ಲೇ ಎಲ್ಲ ಕಡತಗಳೂ ವಿಲೇವಾರಿ ಆಗುತ್ತವೆ. ಇತರ ಇಲಾಖೆಗಳಲ್ಲೇನು ತೊಂದರೆ? ಈ ಬಾರಿ ದಸರಾ ನೆಪದಲ್ಲಿ ಜನರ ಕೆಲಸ ನಡೆಯದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು. ಮುಖ್ಯಮಂತ್ರಿಯೂ ಈ ಸೂಚನೆ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.