ಮೈಸೂರು: ‘ತಂತ್ರಜ್ಞಾನ ಸದ್ಬಳಕೆ, ಕೌಶಲ ಹೆಚ್ಚಳಕ್ಕೆ ರಾಜ್ಯ ಶಿಕ್ಷಣ ನೀತಿ ಒತ್ತು ನೀಡಲಿದೆ’ ಎಂದು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್.ಆರ್.ನಿರಂಜನ ಹೇಳಿದರು.
ಇಲ್ಲಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಗುರುವಾರ ನಡೆದ ‘ಸಸ್ಯಶಾಸ್ತ್ರದಲ್ಲಿ ಹೊಸ ಪ್ರವೃತ್ತಿಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ, ‘ಜೀವಕೋಶಶಾಸ್ತ್ರ ಮತ್ತು ತಳಿಶಾಸ್ತ್ರ’ ಕುರಿತ 15ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಇಂದಿನ ಯುವ ಸಮೂಹದ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೌಶಲಾಧಾರಿತ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗಿದೆ’ ಎಂದರು.
‘ಪದವಿ ವಿದ್ಯಾರ್ಥಿಗಳು ಮೂರು ವಿಷಯಗಳ ಜೊತೆಗೆ ಮತ್ತೊಂದು ವಿಷಯ (ಒಪನ್ ಎಲೆಕ್ಟಿವ್) ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಸ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿಯೂ ಕಲಿಕೆ, ಕೌಶಲ ಜೊತೆಗೆ ಸಂಶೋಧನೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.
‘ಸ್ವಾತಂತ್ರ್ಯ ಬಳಿಕ ದೇಶದ ಸವಾಲಾಗಿದ್ದ ಬಡತನ, ನಿರುದ್ಯೋಗ, ಆಹಾರ ಕೊರತೆ ನೀಗಿಸಲು ಸಸ್ಯಶಾಸ್ತ್ರ ಕ್ಷೇತ್ರವು ಮಹತ್ವದ ಕೊಡುಗೆ ನೀಡಿದೆ. ಹಸಿರು ಕ್ರಾಂತಿಯ ಮೂಲಕ ಆಹಾರದ ಕೊರತೆ ಬಗೆಹರಿಸಲಾಗಿದೆ. ಶಿಕ್ಷಣ ವ್ಯವಸ್ಥೆಯೂ ಹಂತ ಹಂತವಾಗಿ ಬೆಳೆದಿದ್ದು, ಇಂದು ದೇಶದಲ್ಲಿ ಸಾವಿರಾರು ಕಾಲೇಜುಗಳು, ನೂರಾರು ವಿಶ್ವವಿದ್ಯಾಲಯ ಮಹತ್ತರ ಸೇವೆ ನೀಡುತ್ತಿವೆ’ ಎಂದು ಶ್ಲಾಘಿಸಿದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ‘ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನವೂ ಬದಲಾಗುತ್ತಿದ್ದು, ಸಹಯೋಗ, ಸಹಕಾರದೊಂದಿಗೆ ಸಂಶೋಧನೆಗಳು ಹೆಚ್ಚಬೇಕು. ಕಲಿಕೆಯಲ್ಲಿಯೂ ಬದಲಾವಣೆಯಾಗಬೇಕು. ಹುದ್ದೆಗಳಿಗೆ ಅಗತ್ಯವಾದ ಅಧ್ಯಯನ ನಡೆಸಬೇಕು’ ಎಂದರು.
ಜೀವಕೋಶ ಶಾಸ್ತ್ರಜ್ಞರು ಮತ್ತು ತಳಿ ಶಾಸ್ತ್ರಜ್ಞರ ಸೊಸೈಟಿ ಅಧ್ಯಕ್ಷ ಪ್ರೊ.ರಾಕೇಶ್ ಸಿ.ವರ್ಮಾ, ಉಪಾಧ್ಯಕ್ಷ ಪ್ರೊ.ಬಿ.ಎಚ್.ಎಂ.ನಿಜಲಿಂಗಪ್ಪ, ಕಾರ್ಯದರ್ಶಿ ಪ್ರೊ.ಎಂ.ಸಿ.ಗಾಯತ್ರಿ, ಜಂಟಿ ಕಾರ್ಯದರ್ಶಿ ಪ್ರೊ.ಎಲ್.ರಾಜಣ್ಣ, ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ರಾಜ್ಕುಮಾರ್ ಎಚ್.ಗರಂಪಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.