ADVERTISEMENT

ಹೊಸ ಸಂಶೋಧನೆಗೆ ಆದ್ಯತೆ ನೀಡಿ: ಪ್ರೊ. ಕೆ.ಎಸ್. ರಂಗಪ್ಪ

ಭಾರತ–ಜಪಾನ್‌ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ: ಅಂತರರಾಷ್ಟ್ರೀಯ ಕಾರ್ಯಾಗಾರ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:11 IST
Last Updated 19 ಫೆಬ್ರುವರಿ 2026, 4:11 IST
ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿರುವ ಭಾರತೀಯ ರಬ್ಬರ್ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆಯಲ್ಲಿ ಪ್ರೊ. ಕೆ.ಎಸ್. ರಂಗಪ್ಪ, ಸಿ.ಜಿ. ಬೆಟಸೂರಮಠ್‌, ಬಿ. ಸುರೇಶ್‌, ಎ.ಎನ್. ಸಂತೋಷ್‌ಕುಮಾರ್, ತೇರೂ ಸೋನೆ, ಬಿ. ಸಿದ್ದಬಸವೇಗೌಡ ಹಾಗೂ ಜಪಾನ್‌ನ ಹೋಕೈಡೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡರು
ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿರುವ ಭಾರತೀಯ ರಬ್ಬರ್ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆಯಲ್ಲಿ ಪ್ರೊ. ಕೆ.ಎಸ್. ರಂಗಪ್ಪ, ಸಿ.ಜಿ. ಬೆಟಸೂರಮಠ್‌, ಬಿ. ಸುರೇಶ್‌, ಎ.ಎನ್. ಸಂತೋಷ್‌ಕುಮಾರ್, ತೇರೂ ಸೋನೆ, ಬಿ. ಸಿದ್ದಬಸವೇಗೌಡ ಹಾಗೂ ಜಪಾನ್‌ನ ಹೋಕೈಡೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡರು   

ಮೈಸೂರು: ‘ಮುಂದಿನ ಪೀಳಿಗೆಯು ಜಾಗತಿಕ ಸವಾಲುಗಳನ್ನು ಎದುರಿಸಲು ಪರಸ್ಪರ ಸಹಕಾರದ ಅಗತ್ಯವಿದೆ. ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆಗಳಿಗೆ ಆದ್ಯತೆ ನೀಡಬೇಕಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಆಶಿಸಿದರು.

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಜಪಾನಿನ ಹೋಕೈಡೊ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಭಾರತ–ಜಪಾನ್‌ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ರಸಾಯನ ವಿಜ್ಞಾನ ಮತ್ತು ಆಹಾರದ ನಡುವಿನ ಸೇತುವೆ - ಸುಸ್ಥಿರ ಸಮಾಜಕ್ಕೆ ಒಂದು ಸಂಯೋಜಿತ ವಿಧಾನ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಹಾಗೂ ಜಪಾನ್ ಸುದೀರ್ಘ ಅವಧಿಯ ಒಡನಾಟ ಹೊಂದಿವೆ. ಶಿಕ್ಷಣ, ತಾಂತ್ರಿಕತೆ, ಸಂಶೋಧನೆಯಲ್ಲಿ ಪರಸ್ಪರ ಸಹಕಾರ ನೀಡುತ್ತ ಬಂದಿವೆ. ಜಪಾನ್ ಶಿಸ್ತು ಮತ್ತು ಚುರುಕು ತಂತ್ರಜ್ಞಾನ ಹೊಂದಿದ್ದರೆ, ಭಾರತ ಪ್ರತಿಭೆ ಮತ್ತು ಕೌಶಲದ ಆಗರವಾಗಿದೆ. ಜಪಾನ್ ವಿದ್ಯಾರ್ಥಿಗಳು ‌ಭಾರತದ ಪ್ರಯೋಗಾಲಯಗಳಲ್ಲಿ ಕಲಿಯುವುದು ಹೊಸ ಅನುಭವ ನೀಡಲಿದೆ. ಈ ದೇಶಗಳ ವಿಶ್ವವಿದ್ಯಾಲಯಗಳ ನಡುವೆ ಇಂತಹ ಸಹಕಾರ–ತರಬೇತಿಗಳು ಭವಿಷ್ಯದಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ರೂಪಿಸಲಿದೆ. ಎರಡೂ ದೇಶಗಳು ತಮ್ಮ ಆದ್ಯತಾ ವಲಯಗಳನ್ನು ಗುರುತಿಸಿ ಜಂಟಿ ಅನುದಾನ ಒದಗಿಸಬೇಕು’ ಎಂದರು.

ADVERTISEMENT

‘ಹವಾಮಾನ ವೈಪರೀತ್ಯವು ಆಹಾರ ಉತ್ಪಾದನೆಗೆ ಹೊಸ ಸವಾಲು ತಂದೊಡ್ಡಿದೆ. ಆಹಾರ‌‌ ವಿಜ್ಞಾನವು ಇನ್ನಷ್ಟು ಸುರಕ್ಷಾ‌ ಹಾಗೂ ಸುಸ್ಥಿರ ಕ್ರಮಗಳಿಗೆ ಆದ್ಯತೆ‌ ನೀಡಬೇಕಿದೆ. ಉತ್ತಮ ಪ್ಯಾಕೇಜಿಂಗ್ ತಂತ್ರಜ್ಞಾನ, ಆಹಾರವನ್ನು ಸುದೀರ್ಘ ಅವಧಿಗೆ ಕಾಪಿಡುವ ವ್ಯವಸ್ಥೆ ಬೇಕಿದೆ’ ಎಂದರು.

ಹೋಕೈಡೊ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಬಿ. ಸಿದ್ದಬಸವಗೌಡ ‘ಹಲವು ದಶಕಗಳಿಂದ ಎರಡೂ ರಾಷ್ಟ್ರಗಳು ಪರಸ್ಪರ ಸಹಕಾರದಲ್ಲಿವೆ. ಜಪಾನ್ ತಂತ್ರಜ್ಞಾನ ಹಾಗೂ‌ ಭಾರತದ ಮಿದುಳು ಸೇರಿದರೆ ಯಶಸ್ಸು ಖಂಡಿತ’ ಎಂದರು.

ಜೆಎಸ್‌ಎಸ್‌ ಎಸ್‌ಟಿಯು ಕುಲಪತಿ ಎ.ಎನ್‌. ಸಂತೋಷ್‌ಕುಮಾರ್‌, ‘ಕೃಷಿ‌ ಉತ್ಪಾದನೆ ಹಾಗೂ ಆಹಾರ ಸಂಸ್ಕರಣೆಯಲ್ಲಿ ತೀವ್ರ ಬದಲಾವಣೆ ಆಗುತ್ತಿದ್ದು, ರಸಾಯನ ವಿಜ್ಞಾನಕ್ಕೆ ಹಲವು ಸವಾಲುಗಳನ್ನು ಒಡ್ಡಿದೆ. ಆಹಾರ ಸಂಸ್ಕರಣೆಯು ಸುರಕ್ಷಿವಾಗಿ ನಡೆಯಲು ಇನ್ನಷ್ಟು ಹೊಸ ಪರಿಸರ ಸ್ನೇಹಿ ಆವಿಷ್ಕಾರಗಳ ಅಗತ್ಯವಿದೆ. ಭಾರತದಲ್ಲಿ ವರ್ಷಕ್ಕೆ ಸುಮಾರು 80 ದಶಲಕ್ಷ ಟನ್‌ ಆಹಾರ ಧಾನ್ಯ ವ್ಯರ್ಥ ಆಗುತ್ತಿದೆ. ವಿಜ್ಞಾನವು ಇದನ್ನು ತಡೆದಲ್ಲಿ ಇನ್ನಷ್ಟು ಜನರಿಗೆ ಆಹಾರ ಒದಗಿಸಲು ಸಾಧ್ಯವಿದೆ’ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ, ಜೆಎಸ್‌ಎಸ್‌ ಎಎಚ್‌ಇಆರ್‌ ಸಮ ಕುಲಾಧಿಪತಿ ಬಿ. ಸುರೇಶ್‌, ಹೋಕೈಡೊ ವಿಶ್ವವಿದ್ಯಾಲಯದ ಪ್ರೊ. ತೇರೂ ಸೋನೆ, ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಎಂ. ಸೆಂಥಿಲ್‌ಕುಮಾರ್, ಜೆಎಸ್‌ಎಸ್ ಎಸ್‌ಟಿಯು ಕುಲಸಚಿವ ಎಸ್.ಎ. ಧನರಾಜ್‌, ಎಸ್‌ಜೆಸಿಇ ಪ್ರಾಂಶುಪಾಲ ಸಿ. ನಟರಾಜು, ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಮಲ್ಲು ಪಾಲ್ಗೊಂಡರು. 

ಎಂಟು ದಿನಗಳ ಪ್ರವಾಸ

ಭಾರತ–ಜಪಾನ್ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಹೋಕೈಡೊ ವಿ.ವಿ.ಯ 16 ವಿದ್ಯಾರ್ಥಿಗಳು ಹಾಗೂ ಮೂವರು ಅಧ್ಯಾಪಕರನ್ನು ಒಳಗೊಂಡ ತಂಡವು ಭಾರತ ಪ್ರವಾಸ ಕೈಗೊಂಡಿದೆ. ಮೈಸೂರಿನ 11 ವಿದ್ಯಾರ್ಥಿಗಳು ಹಾಗೂ ಐವರು ಅಧ್ಯಾಪಕರು ಇವರಿಗೆ ಜೊತೆಯಾಗಿದ್ದಾರೆ. ಈ ತಂಡವು ಫೆ. 18ರಿಂದ 25ರವರೆಗೆ ಮೈಸೂರು ಮಂಡ್ಯ ಕೊಡಗು ರಾಮನಗರ ಜಿಲ್ಲೆಗಳ ವಿವಿಧೆಡೆ ಭೇಟಿ ನೀಡಿ ಕೃಷಿ ಮತ್ತು ಆಹಾರ ವಿಜ್ಞಾನ ಸಂಬಂಧಿ ಅಧ್ಯಯನ ಕೈಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.