ADVERTISEMENT

Mysuru Dasara 2025: ಸೆ. 23ರಿಂದ 5 ದಿನ ಉತ್ತನಹಳ್ಳಿ ಮೈದಾನದಲ್ಲಿ ಸಂಗೀತ ಸುಧೆ

ಆರ್.ಜಿತೇಂದ್ರ
Published 16 ಸೆಪ್ಟೆಂಬರ್ 2025, 2:17 IST
Last Updated 16 ಸೆಪ್ಟೆಂಬರ್ 2025, 2:17 IST
ಸುನಿಧಿ
ಸುನಿಧಿ   

ಮೈಸೂರು: ಈ ಬಾರಿಯ ಯುವ ದಸರೆಯಲ್ಲಿ ಬಾಲಿವುಡ್‌ ಗಾಯಕಿ ಸುನಿಧಿ ಚೌಹಾಣ್‌ ಯುವಜನರ ಎದೆಯಲ್ಲಿ ಕಿಚ್ಚು ಹೊತ್ತಿಸಲಿದ್ದಾರೆ. ಜೊತೆಗೆ ದೇವಿಶ್ರೀ ಪ್ರಸಾದ್, ಪ್ರೀತಂ ಚಕ್ರವರ್ತಿ, ಅರ್ಜುನ್‌ ಜನ್ಯರಂತಹ ಸಂಗೀತ ನಿರ್ದೇಶಕರ ಸಾರಥ್ಯದಲ್ಲಿ ಸಂಗೀತ ರಸದೌತಣವೂ ಇರಲಿದೆ.

ಸೆ. 23ರಿಂದ 27ರವರೆಗೆ ಐದು ದಿನ ಸಂಜೆ 6ರಿಂದ ರಾತ್ರಿ 10.30ರವರೆಗೆ ರಿಂಗ್‌ ರಸ್ತೆ ಸಮೀಪದ ಉತ್ತನಹಳ್ಳಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನೇಕ ಖ್ಯಾತನಾಮ ಗಾಯಕರು ಯುವ ಮನಸ್ಸುಗಳಿಗೆ ಜೋಶ್ ತುಂಬಲಿದ್ದಾರೆ. ಈ ವರ್ಷವೂ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅದಕ್ಕಾಗಿ ವೇದಿಕೆ ಸಿದ್ಧಪಡಿಸುವ ಕಾರ್ಯ ಆರಂಭವಾಗುತ್ತಿದೆ.

ಕಳೆದ ವರ್ಷ ಶ್ರೇಯಾ ಘೋಷಾಲ್‌ ಮೈಸೂರು ನೆಲದಲ್ಲಿ ಬಾಲಿವುಡ್ ಕಂಪು ಹರಿಸಿದ್ದರು. ಈ ಬಾರಿ ಅವರ ಸ್ಥಾನದಲ್ಲಿ ಸುನಿಧಿ ಚೌಹಾಣ್‌ ಬರಲಿದ್ದು, ಯುವ ದಸರೆಯ ಪ್ರಮುಖ ಆಕರ್ಷಣೆಯೂ ಆಗಲಿದ್ದಾರೆ. ತಮ್ಮ ವಿಶಿಷ್ಟ ಕಂಠಸಿರಿಯಿಂದ ಗಮನ ಸೆಳೆದಿರುವ ಈ ಗಾಯಕಿ 2022ರಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಗಾಗಲೇ ಮೈಸೂರಿಗರನ್ನು ರಂಜಿಸಿದ್ದರು. ಈ ಬಾರಿ ಯುವ ದಸರೆಯ ಕಡೆಯ ದಿನವಾದ ಸೆ. 27ರಂದು ಕಾರ್ಯಕ್ರಮ ನೀಡಲಿದ್ದಾರೆ.

ADVERTISEMENT

ಸೆ. 23ರಂದು ಯುವ ದಸರಾ ಅನಾವರಣಗೊಳ್ಳಲಿದ್ದು, ಉದ್ಘಾಟನೆ ದಿನದಂದು ರಾತ್ರಿ 8ರಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದ ತಂಡವು ‘ಸ್ಯಾಂಡಲ್‌ವುಡ್‌ ನೈಟ್ಸ್‌’ ಹೆಸರಿನಲ್ಲಿ ಕನ್ನಡದ ಸುಮಧುರ ಗೀತೆಗಳ ಸವಿ ಉಣಬಡಿಸಲಿದೆ. ಖ್ಯಾತ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಮತ್ತು ತಂಡ ಸೆ. 24ರಂದು ಹಾಗೂ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಮತ್ತು ತಂಡ ಸೆ. 25ರಂದು ಕಾರ್ಯಕ್ರಮ ನೀಡಲಿದ್ದಾರೆ.

ತೆಲುಗಿನ ‘ಪುಷ್ಪಾ’, ‘ರಂಗಸ್ಥಲಂ’ ಖ್ಯಾತಿಯ ಸಂಗೀತ ನಿರ್ದೇಶಕ ಡಿಎಸ್‌ಪಿ ಅಲಿಯಾಸ್‌ ದೇವಿಶ್ರೀ ಪ್ರಸಾದ್ ಸಹ ಈ ಬಾರಿ ಕಾರ್ಯಕ್ರಮ ನೀಡುತ್ತಿದ್ದಾರೆ. ಸೆ. 26ರಂದು ಅವರು ರಂಜಿಸಲಿದ್ದಾರೆ.

ಜೊತೆಗೆ ಪ್ರತಿ ದಿನ ಆರಂಭದಲ್ಲಿ ಸ್ಥಳೀಯ ಕಲಾವಿದರಿಗೂ ಸಾಂಸ್ಕೃತಿಕ ಪ್ರದರ್ಶನಗಳಿಗೆ ಅವಕಾಶ ನೀಡಲಾಗುತ್ತಿದೆ.

20 ಸಾವಿರ ಆಸನ:

ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆಂದೇ ಸುಮಾರು 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಗೆ ಉಚಿತ ಪ್ರವೇಶ ಇರಲಿದೆ. ಜೊತೆಗೆ 1 ಲಕ್ಷದಷ್ಟು ಜನರು ನಿಂತು ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

ವೆಚ್ಚ ಇಳಿಕೆ ಸಾಧ್ಯತೆ:

ಕಳೆದ ವರ್ಷ ಇಳಯರಾಜ, ಎ.ಆರ್. ರೆಹಮಾನ್, ಶ್ರೇಯಾ ಘೋಷಾಲ್‌, ಬಾದ್‌ಷಾ ಸೇರಿದಂತೆ ಹಲವು ಖ್ಯಾತನಾಮರ ಸಂಗೀತ ಸುಧೆಯು ಯುವ ದಸರಾವನ್ನು ಇನ್ನಷ್ಟು ರಂಗಾಗಿಸಿತ್ತು. ಇದೇ ಕಾರಣಕ್ಕೆ ಇದರ ಖರ್ಚು ವೆಚ್ಚವೂ ಹೆಚ್ಚಾಗಿತ್ತು. ಆದರೆ ಈ ಬಾರಿ ಈ ಕಾರ್ಯಕ್ರಮದ ವೆಚ್ಚ ಅರ್ಧದಷ್ಟು ತಗ್ಗುವ ನಿರೀಕ್ಷೆ ಇದೆ.

ಟಿಕೆಟ್‌ ದರ ₹5 ಸಾವಿರ

ಯುವ ದಸರಾವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಬಯಸುವವರಿಗೆ ವಿಶೇಷ ಟಿಕೆಟ್ ವ್ಯವಸ್ಥೆ ಇದ್ದು ₹5 ಸಾವಿರ ಹಾಗೂ ₹2500 ದರ ನಿಗದಿಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಟಿಕೆಟ್‌ನ ಬೆಲೆ ಕೊಂಚ ಇಳಿದಿದೆ. ಜಿಲ್ಲಾಡಳಿತವು ಕಳೆದ ವರ್ಷದಿಂದ ಮಹಾರಾಜ ಕಾಲೇಜು ಮೈದಾನದ ಬದಲಿಗೆ ರಿಂಗ್‌ ರಸ್ತೆ ಸಮೀಪದ ಉತ್ತನಹಳ್ಳಿ ಮೈದಾನದಲ್ಲಿ ಯುವ ದಸರಾ ಆಯೋಜಿಸುತ್ತ ಬಂದಿದೆ. ಕಳೆದ ವರ್ಷ ಮೊದಲ ಬಾರಿಗೆ ಈ ಕಾರ್ಯಕ್ರಮಕ್ಕೆ ಟಿಕೆಟ್ ವ್ಯವಸ್ಥೆ ಜಾರಿಗೆ ತಂದಿತ್ತು. ವೇದಿಕೆಯ ಮುಂಭಾಗದಲ್ಲಿ ವಿಶೇಷ ಆಸನಗಳ ವ್ಯವಸ್ಥೆ ಕಲ್ಪಿಸಿ ಅಲ್ಲಿ ಟಿಕೆಟ್‌ ಮೂಲಕ ಪ್ರವೇಶ ನೀಡಲಾಗಿತ್ತು. ಇದಕ್ಕಾಗಿ ₹8 ಸಾವಿರ ₹5 ಸಾವಿರ ಹಾಗೂ ₹2500 ಬೆಲೆಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಟಿಕೆಟ್‌ಗಳಿಂದಲೇ ಸುಮಾರು ₹3 ಕೋಟಿಯಷ್ಟು ಆದಾಯ ಸಂಗ್ರಹ ಆಗಿತ್ತು. ಈ ಬಾರಿ ಸದ್ಯದಲ್ಲೇ ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭ ಆಗಲಿದೆ.

ಮೈಸೂರು ದಸರಾ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳು ಸಿಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.