
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಆವರಣದಲ್ಲಿ ಕಬಿನಿ ರೈತ ಹಿತರಕ್ಷಣಾ ಸಮಿತಿಯ ಸದಸ್ಯರು ಕಬಿನಿ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್ ತೆರುವುಗೊಳಿಸಲು ಒತ್ತಾಯಿಸಿ ಪ್ರತಿಭಟಿಸಿದರು ಪ್ರಜಾವಾಣಿ ಚಿತ್ರ
ಮೈಸೂರು: ಕಬಿನಿ, ನಾಗರಹೊಳೆ, ಬಂಡೀಪುರ ಅರಣ್ಯದಲ್ಲಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ ರೆಸಾರ್ಟ್, ಬಾರ್, ಹೋಟೆಲ್ಗಳ ತೆರವಿಗೆ ಒತ್ತಾಯಿಸಿ ಕಬಿನಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
‘ಅರಣ್ಯ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಹೋಟೆಲ್, ರೆಸಾರ್ಟ್, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವುಗಳ ಕಾರ್ಯಾಚರಣೆಯಿಂದ ಕಾಡಿನ ಪ್ರಾಣಿಗಳಿಗೆ ತೊಂದರೆಯಾಗುತ್ತಿದ್ದು, ರಕ್ಷಣೆ, ಆಹಾರಕ್ಕಾಗಿ ನಾಡಿಗೆ ಬರಲು ಆರಂಭಿಸಿವೆ. ಇದರಿಂದ ಕಾಡಂಚಿನ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು, ರೈತರು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನಡೆದ ಹುಲಿ ದಾಳಿಗೆ ನಾಲ್ವರು ರೈತರು ಬಲಿಯಾಗಿದ್ದಾರೆ. ಸಾಕಷ್ಟು ಜಾನುವಾರುಗಳು ಹುಲಿಗೆ ಆಹಾರವಾಗಿವೆ’ ಎಂದು ದೂರಿದರು.
‘ರೈತರ ಅಭಿಪ್ರಾಯ ಪಡೆದು ಸರ್ಕಾರದ ಮಟ್ಟದಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಅಕ್ರಮ ಹಾಗೂ ಸಕ್ರಮದ ಬಗ್ಗೆ ವರದಿ ತಯಾರಿಸಬೇಕು. ಈ ಭಾಗದ ರೈತರು ಮತ್ತು ಕಾಡಂಚಿನ ಪ್ರದೇಶದ ರಕ್ಷಣೆಗೆ ಮುಂದಾಗಬೇಕು. ಯಾವ್ಯಾವ ಸಚಿವರು, ಶಾಸಕರ ಅವಧಿಯಲ್ಲಿ ಎಷ್ಟೆಷ್ಟು ಅಕ್ರಮಗಳಾಗಿವೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.
ಸಮಿತಿಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಖಜಾಂಚಿ ಕೆರೆಹುಂಡಿ ರಾಜಣ್ಣ, ಸಂಚಾಲಕ ಅನುಮಯ್ಯ, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ಉಪಾಧ್ಯಕ್ಷ ದೇವನೂರು ನಾಗೇಂದ್ರ, ಮಹೇಂದ್ರ ಮುದ್ದಳ್ಳಿ, ಮಧುಸೂದನ್, ಚಿದಂಬರ.ಪಿ, ಮರಳಿ ಶಿವಣ್ಣ, ಅಂಡುವಿನಹಳ್ಳಿ ಮಹೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.