
ರೇಷ್ಮೆ ಸೀರೆ
ಮೈಸೂರು: ಕೆಎಸ್ಐಸಿಯ ಇಲ್ಲಿನ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ಶನಿವಾರವೂ ದಾಸ್ತಾನು ಕೊರತೆ ಮುಂದುವರೆದಿತ್ತು. ಬಹುತೇಕ ಮಳಿಗೆಗಳಲ್ಲಿ ಕೆಲವೇ ಸೀರೆಗಳು ಲಭ್ಯವಿವೆ. ವಾರಾಂತ್ಯದ ಕಾರಣ ಮಳಿಗೆಯತ್ತ ಧಾವಿಸಿದ ಗ್ರಾಹಕರಿಗೆ ಇಷ್ಟದ ಸೀರೆಗಳು ಸಿಗಲಿಲ್ಲ.
ಈ ನಡುವೆ ಮೈಸೂರಿನ ನೇಯ್ಗೆ ಘಟಕವು ಕಾರ್ಯಾರಂಭಗೊಂಡಿತು. ತಿ.ನರಸೀಪುರದ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಉತ್ಪಾದನಾ ಘಟಕದ ಸಿಬ್ಬಂದಿ ಕೆಲಸ ನಿಲ್ಲಿಸಿದ್ದರಿಂದ ಸೀರೆ ಉತ್ಪಾದನೆ ಸ್ಥಗಿತಗೊಂಡಿತ್ತು. ಮೈಸೂರಿನ ಸೀರೆ ನೇಯ್ಗೆಯ ಘಟಕದ ಸಿಬ್ಬಂದಿಯೂ ಬೆಂಬಲ ನೀಡಿದ್ದರು.
ಶನಿವಾರ ನೇಯ್ಗೆ ಘಟಕ ಕಾರ್ಯಾರಂಭಗೊಂಡಿದೆ. ‘ವಾರದಿಂದ ಕೆಲಸ ನಿಲ್ಲಿಸಿರುವುದಕ್ಕೆ ಬಣ್ಣಗಳಲ್ಲಿ ನೆನೆಸಿಟ್ಟಿದ್ದ, ಸೀರೆ ತಯಾರಿಸಲು ಬಳಸುವ ರೇಷ್ಮೆ ನೂಲುಗಳು ಹಾಳಾಗುವ ಸಂಭವಿತ್ತು. ಹೀಗಾಗಿ ಕೆಲಸ ಆರಂಭಿಸಿದ್ದೇವೆ’ ಎಂದು ನೌಕರರೊಬ್ಬರು ತಿಳಿಸಿದರು.
‘ತಿ.ನರಸೀಪುರದ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಅಲ್ಲಿನ ಕಾರ್ಮಿಕರು ಕೆಲಸ ಆರಂಭಿಸಿಲ್ಲ. ಸಮಸ್ಯೆ ಮುಂದುವರಿದರೆ, ಮೈಸೂರು ಘಟಕಕ್ಕೆ ಅಲ್ಲಿಂದ ರೇಷ್ಮೆ ನೂಲು ದೊರೆಯದೇ ಉತ್ಪಾದನೆ ಸ್ಥಗಿತಗೊಳ್ಳಲಿದೆ’ ಎಂದರು.
‘ಕುಟುಂಬದಲ್ಲಿ ಕಾರ್ಯಕ್ರಮವಿದ್ದು, ಮೈಸೂರು ರೇಷ್ಮೆ ಸೀರೆಯೇ ಬೇಕೆಂದು ಶಿವಮೊಗ್ಗದಿಂದ ಬಂದಿದ್ದೇವೆ. ಆದರೆ ಹೆಚ್ಚಿನ ಆಯ್ಕೆಗಳೇ ಇಲ್ಲ’ ಎಂದು ಅಶ್ವಿನಿ ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.