ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಹೆಣ್ಣಾನೆ ‘ಪದ್ಮಾವತಿ’ ಗುರುವಾರ ಮೃತಪಟ್ಟಿತು. ಅದಕ್ಕೆ 71 ವರ್ಷ 2 ತಿಂಗಳು ವಯಸ್ಸಾಗಿತ್ತು.
ಈ ಆನೆಯು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಮೃಗಾಲಯದ ಅವಿಭಾಜ್ಯ ಅಂಗವಾಗಿತ್ತು. ಪ್ರವಾಸಿಗರ ಪ್ರೀತಿಗೆ ಪಾತ್ರವಾಗಿತ್ತು.
1973ರಲ್ಲಿ ಖೆಡ್ಡಾ ಕಾರ್ಯಾಚರಣೆಯ ಸಮಯದಲ್ಲಿ (ಅಂದಾಜು 1953–54ರಲ್ಲಿ ಜನನ) ರಕ್ಷಿಸಲಾಗಿದ್ದ ಆನೆ ಇದು. ಮೈಸೂರು ಮೃಗಾಲಯದ ಇತಿಹಾಸದಲ್ಲಿಯೇ ಅತ್ಯಂತ ಹಿರಿಯ ಆನೆಯಾಗಿತ್ತು. 53 ವರ್ಷ ಮೃಗಾಲಯದ ಆರೈಕೆಯಲ್ಲಿತ್ತು. ಈ ಆನೆಯು 1979ರಲ್ಲಿ ‘ಗಜಲಕ್ಷ್ಮಿ’ (ಪ್ರಸ್ತುತ ಮೈಸೂರು ಮೃಗಾಲಯದಲ್ಲಿದೆ), 1996ರಲ್ಲಿ ‘ಕೋಮಲಾ’ ಹಾಗೂ 2004ರಲ್ಲಿ ‘ಅಭಿಮನ್ಯು’ಗೆ ಜನ್ಮ ನೀಡಿತ್ತು.
ಮೃಗಾಲಯದಲ್ಲಿ ಇರುವವರೆಗೂ ವೀಕ್ಷಕರು, ವನ್ಯಜೀವಿ ಪ್ರಿಯರು ಹಾಗೂ ಸಿಬ್ಬಂದಿಯ ಪ್ರೀತಿಗೆ ಪಾತ್ರವಾಗಿತ್ತು.
ವಯೋಸಹಜ ಕಾರಣದಿಂದಾಗಿ ಈ ಆನೆಗೆ ಶಾಂತಿಯುತ ವಾತಾವರಣ ಒದಗಿಸಲು ನಾಲ್ಕು ವರ್ಷಗಳ ಹಿಂದೆ ಅದನ್ನು ಮೈಸೂರು ಮೃಗಾಲಯದ ಕೂರ್ಗಳ್ಳಿ ಹೊರವಲಯದಲ್ಲಿರುವ ಚಾಮುಂಡಿ ವನ್ಯಜೀವಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆನೆಯು ಮೃಗಾಲಯದ ವೀಕ್ಷಕರಿಂದ ದೂರವಿದ್ದು, ನೈಸರ್ಗಿಕ ವಾತಾವರಣದಲ್ಲಿತ್ತು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ.
ಬುಧವಾರದವರೆಗೂ ಈ ಆನೆಯ ಆರೋಗ್ಯ ಸ್ಥಿರವಾಗಿತ್ತು. ಗುರುವಾರ ಬೆಳಿಗ್ಗೆ ಮೇಲೇಳಲು ಸಾಧ್ಯವಾಗದೆ ಮಲಗಿದ್ದ ಸ್ಥಿತಿಯಲ್ಲೇ ಇತ್ತು. ಮೃಗಾಲಯದ ಪಶುವೈದ್ಯರ ತಂಡವು ತೀವ್ರ ವೈದ್ಯಕೀಯ ಪರೀಕ್ಷೆ ಹಾಗೂ ಸಹಾಯಕ ಚಿಕಿತ್ಸೆ ನೀಡಲಾರಂಭಿಸಿತ್ತು.
ಸಾವಿನ ನಿಖರವಾದ ಕಾರಣ ತಿಳಿಯಲು ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.