
ನಂಜನಗೂಡು: ‘ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಶಾಸಕ ದರ್ಶನ್ ಧ್ರುವನಾರಾಯಣ ಜೊತೆಗೂಡಿ ₹1.6 ಕೋಟಿ ವೆಚ್ಚದ ಸ್ಕ್ಯಾನಿಂಗ್ , ಎಕ್ಸ್ರೇ ಮಷೀನ್ ಸೇರಿದಂತೆ ಅತ್ಯಾಧುನಿಕ ತಪಾಸಣಾ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ₹35 ಲಕ್ಷ ವೆಚ್ಚದಲ್ಲಿ ಸ್ಕ್ಯಾನಿಂಗ್ ಮಿಷಿನ್, ₹35 ಲಕ್ಷ ವೆಚ್ಚದ ಸಿಬಿ ನಾಟ್ ಟಿವಿ ತಪಾಸಣಾ ಯಂತ್ರ, ₹15 ಲಕ್ಷ ವೆಚ್ಚದ ಅಲ್ಟ್ರಾ ಪೋರ್ಟಲ್ ಹ್ಯಾಂಡಲ್ ಡಿಜಿಟಲ್ ಎಕ್ಸರೇ ಮಷೀನ್, ಆರೋಗ್ಯ ಸೇತು ಯೋಜನೆ ಅಡಿ ಒಂದು ಆಂಬುಲೆನ್ಸ್ ವಾಹನವನ್ನು ವಿತರಿಸಲಾಗಿದೆ’ ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ‘ಕಳೆದ ವರ್ಷವೂ ಇದೇ ಕಂಪನಿಯವರು ಎರಡು ಡಯಾಲಿಸಿಸ್ ಯಂತ್ರಗಳನ್ನು ನೀಡಿದ್ದರು’ ಎಂದು ಸ್ಮರಿಸಿದರು.
‘ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರದ ನಿಯಮಾವಳಿಯಂತೆ ಹೆರಿಗೆ ಮಾಡಿಸುವ ಸೌಲಭ್ಯವನ್ನು ತಡೆಹಿಡಿಯಲಾಗಿದೆ. ಕೇಂದ್ರಕ್ಕೆ ಯಡಿಯಾಲ ಭಾಗದ ಕಾಡಂಚಿನ ಪ್ರದೇಶದ ಜನರು ಸಹ ಬಂದು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುತ್ತಿದ್ದು, ಯತೀಂದ್ರ ಅವರು ಮುಖ್ಯಮಂತ್ರಿ ಗಮನಕ್ಕೆ ತಂದು ಸೌಲಭ್ಯ ಮುಂದುವರಿಸಬೇಕು. ಯಡಿಯಾಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಅನುದಾನವನ್ನು ಬಿಡುಗಡೆಗೊಳಿಸಬೇಕು’ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠ ಸ್ವಾಮಿ, ರಾಜ್ಯ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಹಾಡ್ಯರಂಗಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಾರುತಿ, ಹಾಡ್ಯ ಜಯರಾಮ್, ಮುಖಂಡರಾದ ಮುದ್ದು ಮಾದೇಗೌಡ, ತೊರೆಮಾವು ಗಿರೀಶ್, ಕೆ.ಎಂ.ಬಸವರಾಜು, ಗಾಯತ್ರಿ, ಡಿಎಚ್ಒ ಕುಮಾರಸ್ವಾಮಿ, ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.