
ಜೋಳ ಮತ್ತು ಭತ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಸಲ್ಲಿಸಿದರು
ಪಿರಿಯಾಪಟ್ಟಣ: ತಾಲ್ಲೂಕಿನಲ್ಲಿ ಬೆಳೆದಿರುವ ಮುಸುಕಿನ ಜೋಳ ಮತ್ತು ಭತ್ತವನ್ನು ಖರೀದಿಸಲು ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಜೋಳದ ಬೆಳೆಯ ಕಟಾವು ಪ್ರಾರಂಭವಾಗಿದೆ, ಕೂಡಲೇ ಸರ್ಕಾರ ಎಲ್ಲಾ ತಾಲ್ಲೂಕುಗಳಲ್ಲಿ ಅಗತ್ಯವಿರುವ ಕಡೆ ಖರೀದಿ ಕೇಂದ್ರಗಳನ್ನು ತೆಗೆದು ಜೋಳವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಕೊಳ್ಳಬೇಕು. ಜಿಲ್ಲೆಯಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದು ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ಖರೀದಿ ಕೇಂದ್ರಗಳಲ್ಲಿ ಅವ್ಯವಹಾರ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕು, ನಿರಂತರ ಹಗಲು ಹೊತ್ತಿನಲ್ಲಿ 10 ಗಂಟೆ ವಿದ್ಯುತ್ ನೀಡ ಬೇಕು ಎಂದು ಆಗ್ರಹಿಸಿದರು.
150 ಕೆರೆ ನೀರು ತುಂಬಿಸುವ ಯೋಜನೆ ಹೆಸರಿಗೆ ಮಾತ್ರ ಉದ್ಘಾಟನೆಯಾಗಿದ್ದು, ಯಾವುದೇ ಕೆರೆಗೆ ನೀರು ತುಂಬಿಸಿಲ್ಲ. ಶೀಘ್ರದಲ್ಲಿ ಕೆರೆಗೆ ನೀರನ್ನು ತುಂಬಿಸಬೇಕು, ರಾಗಿ ಮತ್ತು ಭತ್ತದ ಖರೀದಿ ಕೇಂದ್ರವನ್ನು ಡಿಸೆಂಬರ್ ತಿಂಗಳಲ್ಲಿ ಪ್ರಾರಂಭ ಮಾಡಬೇಕೆಂದು ಮನವಿ ಮಾಡಿದರು. ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸದಿದ್ದರೆ ರಸ್ತೆ ತಡೆ ಚಳವಳಿ ಹಾಗೂ ಪ್ರತಿಭಟನೆ ತೀವ್ರ ಗೊಳಿಸಲಾಗುವುದು ಎಂದರು.
ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಗುರುರಾಜ್, ಕಾರ್ಯದರ್ಶಿ ರಘುಪತಿ, ಪದಾಧಿಕಾರಿಗಳಾದ ಸತೀಶ್, ಲೋಕೇಶ್, ದಶರಥ, ಬಾಲರಾಜೇ ಅರಸ್, ಕೊಣಸೂರು ಆನಂದ್, ಕುಮಾರ್, ಮಂಜುನಾಥ್, ಕಾವೇರಮ್ಮ, ತುಂಗಾ ಶ್ರೀನಿವಾಸ್ ಸೇರಿದಂತೆ ಕಾರ್ಯಕರ್ತರು ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.