ADVERTISEMENT

ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಹಣ ಅಗತ್ಯ: ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 9:17 IST
Last Updated 1 ಆಗಸ್ಟ್ 2022, 9:17 IST
ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ
ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ   

ಮೈಸೂರು: ‘ಜಿಡಿಪಿಯ (ನಿವ್ವಳ ಆಂತರಿಕ ಉತ್ಪನ್ನ) ಶೇ 10ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಖರ್ಚು ಮಾಡದ ಹೊರತು ಆರ್ಥಿಕತೆಯಲ್ಲಿ ಚೀನಾ, ಅಮೆರಿಕವನ್ನು ಹಿಂದಿಕ್ಕಲು ಸಾಧ್ಯವಿಲ್ಲ’ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದಿಸಿದರು.

ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿ, ‘ಬ್ರಿಟಿಷರ ಶಿಕ್ಷಣ ಪದ್ಧತಿಯನ್ನೇ ಇನ್ನೂ ಅನುಸರಿಸುತ್ತಿದ್ದೇವೆ. ಸುಳ್ಳು ಇತಿಹಾಸವನ್ನು ಮಕ್ಕಳಿಗೆ ಬೋಧಿಸುತ್ತಿದ್ದೇವೆ. ಶಿಕ್ಷಕರಿಗೆ ಅಧಿಕಾರಿಗಳಿಗಿಂತ ಹೆಚ್ಚಿನ ಭತ್ಯೆ ನೀಡಬೇಕು. ಇಡೀ ಕ್ಷೇತ್ರವನ್ನು ಅಮೂಲಾಗ್ರವಾಗಿ ಬದಲಿಸಬೇಕು’ ಎಂದರು.

‘ಇಂಗ್ಲಿಷ್‌ನ ಜಾಗದಲ್ಲಿ ಸಂಸ್ಕೃತವು ಆಡಳಿತ– ಸಂವಹನ ಭಾಷೆಯಾಗಬೇಕು. ಇನ್ನೈವತ್ತು ವರ್ಷಗಳಲ್ಲಿ ಹಿಂದಿಯೇ ಸಂಸ್ಕೃತವಾಗಲಿದೆ. ಹೊಸ ಭಾರತದ ಉದಯಕ್ಕೆ ಸಂಸ್ಕೃತವೇ ಅಡಿಪಾಯವಾಗಲಿದೆ. ಆದ್ದರಿಂದ, ಮಾತೃಭಾಷೆಯ ಜೊತೆಗೆ 10ನೇ ತರಗತಿವರೆಗೆ ಸಂಸ್ಕೃತವನ್ನು ಕಲಿಸಬೇಕು’ ಎಂದರು.

ADVERTISEMENT

‘ಪೆರಿಯಾರ್‌ರ ದ್ರಾವಿಡ ಸಿದ್ಧಾಂತ ಬ್ರಿಟಿಷರ ವಸಹಾತುಶಾಹಿ ಮನಸ್ಥಿತಿಯಿಂದ ಹುಟ್ಟಿದ್ದಾಗಿದೆ. ಬ್ರಿಟಿಷರೇ ಆಳಬೇಕೆಂದು ಅವರು ಮನವಿ ಕೊಟ್ಟಿದ್ದರು. ಆರ್ಯರು ಹೊರಗಿನಿಂದ ಬಂದವರಲ್ಲ. ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ ಅಧ್ಯಯನ ವಿಭಾಗದ ಸಂಶೋಧನೆಯು ದೇಶದ ನಾಗರಿಕರ ವಂಶವಾಹಿಯೆಲ್ಲ ಒಂದೇ ಎಂದು ಹೇಳುತ್ತದೆ. ಹೀಗಾಗಿ ಇಲ್ಲಿನವರೆಲ್ಲರೂ ಹಿಂದೂಗಳೇ’ ಎಂದು ಅಭಿಪ್ರಾಯಪಟ್ಟರು.

‘ವರ್ಣ, ಜಾತಿಗಳು ವೃತ್ತಿ ಆಧರಿಸಿ ವಿಂಗಡಿಸಿದ್ದಾಗಿವೆ. ಯಾರೂ ಬೇಕಾದರೂ ಬ್ರಾಹ್ಮಣರಾಗುವ– ಕ್ಷತ್ರೀಯರಾಗುವ ಅವಕಾಶವಿದೆ. ಕ್ಷತ್ರೀಯ ವಿಶ್ವಾಮಿತ್ರ ಮಹರ್ಷಿಯಾಗಲಿಲ್ಲವೇ? ಸಂವಿಧಾನ ನೀಡಿದ ಅಂಬೇಡ್ಕರ್‌ ಕೂಡ ಬ್ರಾಹ್ಮಣರೇ’ ಎಂದರು.

‘ಭಾರತದ ಅರ್ಥವ್ಯವಸ್ಥೆಯು ಸುಧಾರಿತ ಹಾದಿಯಲ್ಲಿದ್ದು, ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಐದಾರು ವರ್ಷದಲ್ಲಿ ಚೀನಾವನ್ನು ಹಿಂದಿಕ್ಕಲಿದ್ದೇವೆ. ಕೆಲವರು ನನ್ನ ಅನುಭವವನ್ನು ಬಳಸಿಕೊಳ್ಳುತ್ತಿಲ್ಲ. ನನಗೆ ಅಧಿಕಾರ ನೀಡಿದರೆ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ. ಭ್ರಷ್ಟಾಚಾರವನ್ನು ಸಂಪೂರ್ಣ ಕಿತ್ತೊಗೆಯುತ್ತೇನೆ’ ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.