
ಪ್ರಜಾವಾಣಿ ವಾರ್ತೆ
ಮೈಸೂರು: ಹೂಟಗಳ್ಳಿ ನಗರಸಭೆಯ ರಾಜಸ್ವ ನಿರೀಕ್ಷಕ (ಆರ್ಐ) ಸಿ.ರಾಮಸ್ವಾಮಿ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ₹ 2.77 ಕೋಟಿ ಮೌಲ್ಯದ ಸಂಪತ್ತು ಪತ್ತೆ ಮಾಡಿದ್ದಾರೆ. ₹ 1,65,54,000 ಮೌಲ್ಯದ 3 ನಿವೇಶನ, 2 ವಾಸದ ಮನೆ, 7 ಎಕರೆ ಕೃಷಿ ಜಮೀನು ಕಂಡು ಪೊಲೀಸರು ಅಚ್ಚರಿಗೊಂಡಿದ್ದಾರೆ.
ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿರುವ ಮಾಹಿತಿ ಆಧರಿಸಿ ದಾಳಿ ನಡೆದಿದೆ.
ಅವರಿಗೆ ಸಂಬಂಧಿಸಿದ ಮನೆ, ಕಚೇರಿ ಸೇರಿದಂತೆ 3 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲಿಸಲಾಯಿತು. ‘₹ 1,15,660 ನಗದು, ₹ 86,26,100 ಮೌಲ್ಯದ ಚಿನ್ನಾಭರಣ, ₹ 14.80 ಲಕ್ಷ ಬೆಲೆ ಬಾಳುವ ವಾಹನಗಳು, ₹ 10 ಲಕ್ಷ ಮೌಲ್ಯದ ಗೃಹೋಪಯೋಗಿ ಮತ್ತು ಇತರ ವಸ್ತುಗಳು ಸೇರಿದಂತೆ ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ ₹ 1,12,21,760’ ಎಂದು ಲೋಕಾಯುಕ್ತ ಎಸ್.ಪಿ ಉದೇಶ್ ತಿಳಿಸಿದರು.