ಪಿರಿಯಾಪಟ್ಟಣ (ಮೈಸೂರು ಜಿಲ್ಲೆ): ‘ಖಾಲಿ ಕುರ್ಚಿಗಳಿಗೆ ಭಾಷಣ ಮಾಡಲೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದ ಪ್ರಸಂಗ ಶನಿವಾರ ಇಲ್ಲಿ ನಡೆಯಿತು.
ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಭಾಷಣ ಮಾಡುವ ವೇಳೆಗೆ ಕುರ್ಚಿಗಳು ಖಾಲಿಯಾಗಿದ್ದವು.
ಬೆಳಿಗ್ಗೆ 10.45ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಶುರುವಾದಾಗ ಮಧ್ಯಾಹ್ನ 2.50 ಸಮೀಪಿಸಿತ್ತು. ಸಿದ್ದರಾಮಯ್ಯ ಭಾಷಣ ಆರಂಭಿಸಿದಾಗ ಸಂಜೆ 4.20 ಆಗಿತ್ತು. ಆ ವೇಳೆಗೆ ಬಹಳಷ್ಟು ಜನರು ಹೋಗಿದ್ದರು.
ಇದನ್ನು ಭಾಷಣದ ನಡುವೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಬೆಳಿಗ್ಗೆ 11ಕ್ಕೆ ಬರುವಂತೆ ವೆಂಕಟೇಶ್ ನಮಗೆಲ್ಲಾ ಹೇಳಿದ್ದರು. ಆದರೆ, ನಾನು ಮೈಸೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಮುಗಿಸಿ, ಊಟ ಮಾಡಿ ಬರಲು ತಡವಾಯಿತು. ಜನರೂ ತಾನೆ ಎಷ್ಟೊತ್ತು ಕೂರುತ್ತಾರಲ್ಲವೇ? ಎಂದರು.
ಆಗ ಅಭಿಮಾನಿಯೊಬ್ಬರು, ‘ಮಾತನಾಡಿ ಸರ್’ ಎಂದರು. ‘ನೀನ್ಹೇಳ್ತಿಯಾ ಕಣಯ್ಯಾ? ಹಿಂದೆ ನೋಡಿದ್ದೀಯಾ, ಬಹುತೇಕರು ಹೋಗಿಬಿಟ್ಟಿದ್ದಾರೆ. ಖಾಲಿ ಕುರ್ಚಿಗೆ ಭಾಷಣ ಮಾಡಲೇ? ನಾನೀಗ ಹೆಚ್ಚು ಮಾತನಾಡಿದರೆ ಚೆನ್ನಾಗಿರುವುದಿಲ್ಲ’ ಎಂದು ಹೇಳಿ ಭಾಷಣ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.