
ಮೈಸೂರು: ‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ಜಿಲ್ಲಾ ಸಂಚಾಲಕ ಭುಗತಗಳ್ಳಿ ಕೆ.ಮಣಿಯಯ್ಯ ಒತ್ತಾಯಿಸಿದರು.
‘ಹಳೆಯ ಮೀಸಲಾತಿ ಪದ್ಧತಿ ಅನುಸರಿಸಿ 56,432 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಪ್ರಕರಣ ಹೈಕೋರ್ಟ್ನಲ್ಲಿರುವುದರಿಂದ ತೀರ್ಪು ಬಂದ ನಂತರ ಸಾಧಕ–ಬಾಧಕಗಳನ್ನು ಪರಾಮರ್ಶಿಸಿ ಎಲ್ಲರಿಗೂ ನ್ಯಾಯ ಕಲ್ಪಿಸುವ ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಬೇಕು’ ಎಂದು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.
‘ಆಕ್ಷೇಪಣೆ, ಗೊಂದಲಗಳಿಗೆ ಅವಕಾಶ ಆಗದಂತೆ, ಸರ್ವಸಮ್ಮತ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಆಲಗೂಡು ಶಿವಣ್ಣ, ಈಶ್ವರ್ ಬೊಮ್ಮನಹಳ್ಳಿ, ಬೊಕ್ಕಳ್ಳಿ ಲಿಂಗಯ್ಯ, ಎಸ್.ಬಿ. ಸಣ್ಣಸ್ವಾಮಿ ಸರಗೂರು, ನಗರ ಸಂಚಾಲಕ ಮೋಹನ್ಕುಮಾರ್ ವಿ.ಎಸ್., ತಾಲ್ಲೂಕುಗಳ ಸಂಚಾಲಕರಾದ ಶಾಂತಕುಮಾರ್ ಚೌಹಳ್ಳಿ, ಎಂ.ರಾಜಶೇಖರ್, ಕಾಂತರಾಜ್ ಸಿ. ಭುಗತಗಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.