ಮೈಸೂರು: ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಬುಧವಾರ ತುಂತುರು ಮಳೆ ನಡುವೆಯೇ ‘ಯುವ ಸಂಭ್ರಮ’ವು ಮೇಳೈಸಿತು. ಸಾಂಸ್ಕೃತಿಕ ದಸರೆಗೆ ವೈಭವದ ಮುನ್ನುಡಿ ಬರೆಯಿತು.
ಯುವ ಸಮುದಾಯವೇ ತುಂಬಿದ್ದ ಅಂಗಳದ ಬೆಳಕಿನ ವೇದಿಕೆಯನ್ನು ಚಲನಚಿತ್ರ ನಟರಾದ ಯುವ ರಾಜ್ಕುಮಾರ್, ಅಮೃತಾ ಅಯ್ಯಂಗಾರ್ ಪ್ರವೇಶಿಸುತ್ತಿದ್ದಂತೆಯೇ ಶಿಳ್ಳೆ- ಚಪ್ಪಾಳೆ ಮುಗಿಲು ಮುಟ್ಟಿತ್ತು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸ್ಪರ್ಧಿಗಳು, ನೆರೆದಿದ್ದ ಪ್ರೇಕ್ಷಕ ಯುವ ಸಮೂಹವು ಜಯಕಾರ ಹಾಕಿತು.
‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಹೆಜ್ಜೆಗೆ ಹಾಕಿದ ಇಬ್ಬರೂ, ಮಿಂಚಿನ ಸಂಚಲನೆ ಉಂಟು ಮಾಡಿದರು. ಮಳೆ ಬೀಳುತ್ತಿದ್ದರೂ ಯುವ ಸಮೂಹವು ಹುಚ್ಚೆದ್ದು ಕುಣಿಯಿತು. ಜೊತೆಗೆ ಅವರ ಮಾತುಗಳಿಗೂ ಕಿವಿಯಾಯಿತು.
ಹೆಜ್ಜೆ ಹಾಕಿದ್ದೆ: ‘ಶಾಲಾ– ಕಾಲೇಜಿನ ದಿನಗಳಲ್ಲಿ ಇದೇ ಬಯಲು ರಂಗಮಂದಿರದ ವೇದಿಕೆಯಲ್ಲಿ ಕಾಲಿಗೆ ಗೆಜ್ಜೆ ಕಟ್ಟಿದ್ದೆ, ನೃತ್ಯ ಮಾಡಿದ್ದೆ. ಇದೀಗ ನಿಮ್ಮೆದುರು ಮಾತನಾಡುತ್ತಿರುವುದೇ ಅಪೂರ್ವ ಕ್ಷಣ’ ಎಂದು ಅಮೃತ ಅಯ್ಯಂಗಾರ್ ಹೇಳಿದರು.
‘ಮೈಸೂರಲ್ಲಿ ಓಡಿದ ಸಿನಿಮಾ ಎಲ್ಲೆಡೆ ಯಶಸ್ಸು ಗಳಿಸುತ್ತದೆ ಎಂಬುದು ಮಾತು. ನನ್ನ ಊರು ಕೊಟ್ಟಿರುವ ಕೊಡುಗೆ ದೊಡ್ಡದು. ನಮ್ಮ ಜನ ಎಷ್ಟು ಒಳ್ಳೆಯವರು, ಬುದ್ಧಿವಂತರು. ಹೆಚ್ಚು ಕಲಾವಿದರನ್ನು ನಾಡಿಗೆ ಕೊಟ್ಟವರು. ಇಲ್ಲಿಂದ ಮತ್ತಷ್ಟು ಕಲಾವಿದರು ಬರಲಿ’ ಎಂದು ಆಶಿಸಿದರು.
ಯುವ ರಾಜ್ಕುಮಾರ್ ಮಾತನಾಡಿ, ‘ಮೈಸೂರು ನನ್ನಿಷ್ಟದ ಊರು. ಅರಮನೆಯಂತೆಯೇ ಕುವೆಂಪು, ನಾಲ್ವಡಿ, ಸರ್ಎಂವಿ ನೆನಪಾಗುತ್ತಾರೆ. ನಾಡಿನ ಕಲೆ ಸಂಸ್ಕೃತಿಯನ್ನು ಸಂಭ್ರಮಿಸುವ ಹಬ್ಬ ದಸರೆ. ಅದು ರಂಗೇರುವುದು ಯುವ ಸಂಭ್ರಮದಿಂದಲೇ. ಈ ವೇದಿಕೆಯೇ ನಿಮ್ಮದು’ ಎಂದು ಹೇಳಿದರು.
ಚಾಲನೆ: ಜಗಮಗಿಸುವ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯುವ ವೇದಿಕೆಯಲ್ಲಿ ಕಿವಿಗಡಚಿಕ್ಕುವ ಉದ್ಘೋಷಗಳ ನಡುವೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಜ್ಯೋತಿ ಬೆಳಗಿ, ಡೊಳ್ಳು ಬಾರಿಸುವ ಮೂಲಕ ‘ಯುವ ಸಂಭ್ರಮ’ಕ್ಕೆ ಸಡಗರದ ಚಾಲನೆ ನೀಡಿದರು.
ನಂತರ ಮಾತನಾಡಿ, ‘ನಾಡಹಬ್ಬದ ದಸರಾದ ಖ್ಯಾತಿ ವಿಶ್ವದಾದ್ಯಂತ ಚಾಚಿದೆ. ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ವಿದ್ಯಾರ್ಥಿಗಳ ಮೂಲಕ ವಿವಿಧ ಜಿಲ್ಲೆಗಳ ಕಲಾ ಸಂಸ್ಕೃತಿಯು ಅನಾವರಣ ಆಗುತ್ತದೆ’ ಎಂದರು.
ಶಾಸಕ ತನ್ವೀರ್ ಸೇಠ್, ‘ಯುವ ಸಮುದಾಯವನ್ನು ರಂಜಿಸಲು ಯುವ ದಸರಾ ಇತ್ತು. ರಾಜ್ಯದ ಎಲ್ಲ ಜಿಲ್ಲೆಗಳ ಯುವಕರು ತಮ್ಮ ಪ್ರತಿಭೆ ತೋರಿಸುವುದಕ್ಕೆ 2018ರಲ್ಲಿ ಯುವ ಸಂಭ್ರಮ ಶುರು ಮಾಡಲಾಯಿತು. ಇದು ನಿಮಗೆ ನೀಡಿದ ಪ್ರಾತಿನಿಧ್ಯ’ ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಡಿಸಿಪಿ ಆರ್.ಎನ್.ಬಿಂದುಮಣಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಪಾಲ್ಗೊಂಡಿದ್ದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಚಾಲನೆ ಹಾಡುಗಳಿಗೆ ಧೂಳೆಬ್ಬಿಸಿದ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲೂ ಹೆಜ್ಜೆ ಹಾಕಿದ ಯುವ ಪಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.