ADVERTISEMENT

ಮಕ್ಕಳನ್ನು ಗೌರವದಿಂದ ಕಾಣಿರಿ

ಶಾಸಕ ಬಸನಗೌಡ ದದ್ದಲ ಅವರಿಂದ ಭಾಗ್ಯಲಕ್ಷ್ಮೀ ಬಾಂಡ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 15:06 IST
Last Updated 19 ಜನವರಿ 2021, 15:06 IST
ರಾಯಚೂರಿನಲ್ಲಿ ಶಾಸಕ ಬಸನಗೌಡ ದದ್ದಲ ಅವರ ಕಚೇರಿಯಲ್ಲಿ ಗಿಲ್ಲೆಸುಗೂರು ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮೀ ಬಾಂಡ್ ವಿತರಿಸಿದರು
ರಾಯಚೂರಿನಲ್ಲಿ ಶಾಸಕ ಬಸನಗೌಡ ದದ್ದಲ ಅವರ ಕಚೇರಿಯಲ್ಲಿ ಗಿಲ್ಲೆಸುಗೂರು ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮೀ ಬಾಂಡ್ ವಿತರಿಸಿದರು   

ರಾಯಚೂರು: ಹೆಣ್ಣು ಮಕ್ಕಳನ್ನು ಕೀಳಾಗಿ ನೋಡದೆ, ಗೌರವದಿಂದ ಕಾಣಬೇಕು ಎಂದು ಶಾಸಕ ಬಸನಗೌಡ ದದ್ದಲ್ ಸಲಹೆ ನೀಡಿದರು.

ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕಿನ ಗಿಲ್ಲೆಸುಗೂರು ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮೀ ಬಾಂಡ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಅದನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕು. ಭಾಗ್ಯಲಕ್ಷ್ಮಿ ಯೋಜನೆ ಆರಂಭವಾಗಿ ಪ್ರತಿವರ್ಷ 700 ರಿಂದ 800 ಪ್ರತಿ ತಾಲ್ಲೂಕುಗಳಲ್ಲಿ ನೀಡಲಾಗುತ್ತಿದೆ. ಹೆಣ್ಣು ಮಕ್ಕಳು ಹುಟ್ಟಿದಾಗ ಹೊರೆ ಎಂಬ ಭಾವನೆಯಿಂದಾಗಿ ಕೀಳರಿಮೆ ಬರಬಾರದು ಎಂಬ ಉದ್ದೇಶದಿಂದ ಈ ಹಿಂದೆಯೇ ರಾಜ್ಯ ಸರ್ಕಾರವು ಮಹತ್ವದ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.

ADVERTISEMENT

ಜಗತ್ತು ಹೆಣ್ಣಿನಿಂದ ಸೃಷ್ಟಿಯಾಗಿದೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಹೆಣ್ಣಿಲ್ಲದಿದ್ದರೆ ಸಮಾಜ ಅಪೂರ್ಣ. ಹೆಣ್ಣು ಮಕ್ಕಳು ಹುಟ್ಟಿದರೆ ಸಂತೋಷ ಪಡಬೇಕು. ಹೆಣ್ಣನ್ನು ಲಕ್ಷ್ಮೀ ಎಂದು ಕರೆಯುವ ನಮ್ಮ ದೇಶದಲ್ಲಿ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.

ಅನೇಕ ಗಂಡು ಮಕ್ಕಳು ತಮ್ಮ ತಂದೆತಾಯಿಗಳನ್ನು ಹೊರಹಾಕಿ ವೃದ್ಧಾಶ್ರಮಕ್ಕೆ ಕಳುಸುತ್ತಾರೆ. ಆದರೆ ವೃದ್ಧರಾದ ತಂದೆ–ತಾಯಿಯನ್ನು ಅವರ ಹೆಣ್ಣು ಮಕ್ಕಳು ಗೌರವದಿಂದ ಕಾಣುತ್ತಾರೆ. ಕೈಲಾದಷ್ಟು ಕಾಳಜಿ ವಹಿಸಿ ಗೌರವದಿಂದ ಬದುಕುವುದಕ್ಕೆ ನೆರವಾಗುತ್ತಾರೆ. ಮಹಿಳೆಯರಲ್ಲಿ ಇರುವ ಅತಃಕರಣ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಪುರಷರಿಗಿಂತಲೂ ನಿಯತ್ತಿನಿಂದ ಕೆಲಸ ಮಾಡುತ್ತಿದ್ದಾರೆ. ಪುರುಷ ಸಿಬ್ಬಂದಿಯಂತೆ ಸಮಯ ವ್ಯರ್ಥ ಕಾಲಹರಣ ಮಾಡುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೆಣ್ಣನ್ನು ಸಮಾಜ ಗೌರವದಿಂದ ನೊಡಬೇಕು ಎಂದು ತಿಳಿಸಿದರು.

ಹೆಣ್ಣು ಮಕ್ಕಳ ಜನನದಿಂದ ಕುಟುಂಬಗಳು ಮತ್ತಷ್ಟು ಉನ್ನತಿ ಹೊಂದುತ್ತವೆ. ಹೆಣ್ಣು ಕುಟುಂಬಕ್ಕೆ ಹೊರೆ ಎನ್ನುವ ಮೂಢನಂಬಿಕೆಯನ್ನು ತೊಲಗಿಸಬೇಕು. ಪ್ರತಿವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭಾಗ್ಯಲಕ್ಷ್ಮೀ ಬಾಂಡ್‌ ವಿತರಿಸಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಸದಸ್ಯ ಸಂಗಮೇಶ ಭಂಡಾರಿ, ಬಸವನಗೌಡ ತುರುಕನದೋಣಿ, ಮುಖಂಡ ಮಲ್ಲಿಕಾರ್ಜುನ ಗೌಡ, ಶಶಿಕಲಾ ಭೀಮರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.