ADVERTISEMENT

ರಾಯಚೂರು | ಕೆಲಸ ಇಲ್ಲದೇ ಗೃಹ ರಕ್ಷಕರು ಕಂಗಾಲು: ದಿನದ ತುತ್ತಿಗೂ ಕಷ್ಟ

ಕಳೆದ ಆರು ತಿಂಗಳಿಂದ ಇಲ್ಲ ಕೆಲಸ; ಜೀವನ ನಿರ್ವಹಣೆಗೆ ಪರದಾಟ

ಉಮಾಪತಿ ಬಿ.ರಾಮೋಜಿ
Published 3 ಡಿಸೆಂಬರ್ 2022, 8:46 IST
Last Updated 3 ಡಿಸೆಂಬರ್ 2022, 8:46 IST
ಶಕ್ತಿನಗರ ಗೃಹರಕ್ಷಕ ದಳ ಘಟಕದ ಸಿಬ್ಬಂದಿ
ಶಕ್ತಿನಗರ ಗೃಹರಕ್ಷಕ ದಳ ಘಟಕದ ಸಿಬ್ಬಂದಿ   

ಶಕ್ತಿನಗರ: ಜಿಲ್ಲೆಯಲ್ಲಿ ಕಳೆದ ಆರೇಳು ತಿಂಗಳಿಂದ ಕೆಲಸವಿಲ್ಲದೇ ಗೃಹರಕ್ಷಕ ದಳದ ಸಿಬ್ಬಂದಿ ಜೀವನ ಸಾಗಿಸಲು ಪರದಾಡುತ್ತಿದ್ದಾರೆ.

ರಾಯಚೂರು ತಾಲ್ಲೂಕಿನಲ್ಲಿ 400 ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 800 ಗೃಹರಕ್ಷಕರಿದ್ದು, ಅವರೀಗ ಕೆಲಸವಿಲ್ಲದೇ ಜಮೀನುಗಳಲ್ಲಿ ಕೃಷಿ ಚಟುವಟಿಕೆ, ಗಾರೆ ಕೆಲಸದಲ್ಲಿ ಕೂಲಿಕಾರ್ಮಿಕರಾಗಿ ತೊಡಗಿಕೊಂಡಿದ್ದಾರೆ. ಇನ್ನೂ ಕೆಲವರು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ.

ತೆಲಂಗಾಣ ಮಾದರಿಯಲ್ಲಿ ವರ್ಷದ 365 ದಿನವೂ ಕೆಲಸ ನೀಡುವಂತೆ ಕರ್ನಾಟಕ ಗೃಹರಕ್ಷಕ ದಳ ಸಿಬ್ಬಂದಿ ಮನವಿ ಮಾಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.ಕಳೆದ ಹತ್ತಾರು ವರ್ಷಗಳಿಂದ ಪೊಲೀಸ್‌, ಆರ್‌ಟಿಒ, ಬಂಧಿಖಾನೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕರ್ತವ್ಯಗಳಲ್ಲಿ ತೊಡಗಿಕೊಂಡಿರುವ ಗೃಹರಕ್ಷಕ ಸಿಬ್ಬಂದಿ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಸರ್ಕಾರದಿಂದ ಸದ್ಯ ನೀಡುತ್ತಿರುವ ಗೌರವಧನ ₹ 380 ರಿಂದ 750ವರೆಗೆ ಇದೆ. ರಾಜ್ಯದ ಎಲ್ಲಾ ಗೃಹರಕ್ಷಕರಿಗೂ ಸಮಾನ ಗೌರವಧನ ನೀಡಬೇಕು. ಕೌಟುಂಬಿಕ ಆರೋಗ್ಯ ವಿಮೆ, ಮಹಿಳಾ ಗೃಹರಕ್ಷಕಿಯರಿಗೆ ಕರ್ತವ್ಯದ ಅವಧಿಯಲ್ಲಿ ಸೂಕ್ತ ಸೌಲಭ್ಯ ಒದಗಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಗೃಹರಕ್ಷಕರು ಒತ್ತಾಯಿಸಿದ್ದಾರೆ.

ADVERTISEMENT

ಸಮಾಜಕ್ಕೆ ಮೌಲ್ಯಯುತವಾದ ಸೇವೆಯನ್ನು ಗೃಹ ರಕ್ಷದ ದಳದ ಸಿಬ್ಬಂದಿ ನೀಡುತ್ತಿದ್ದಾರೆ. ಸರ್ಕಾರದ ಅಧೀನದಲ್ಲಿ ಶಿಸ್ತುಬದ್ಧ ಸೇವೆ ನೀಡುತ್ತಿದೆ. ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ, ಪ್ರಾಕೃತಿಕ ವಿಪತ್ತು ನಿರ್ವಹಣೆ, ಬೆಂಕಿ ಅನಾಹುತ, ದಾಳಿ, ಸುನಾಮಿ, ಭೂಕಂಪ, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಸಂಕಷ್ಟದ ದಿನಗಳಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವಗೃಹರಕ್ಷಕರಿಗೆ ಹಂತ ಹಂತವಾಗಿ ಇದ್ದ ಕರ್ತವ್ಯವನ್ನೂ ಕಡಿಮೆ ಮಾಡಲಾಗುತ್ತಿದೆ ಎಂದು ಗೃಹರಕ್ಷಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.