ರಾಯಚೂರು: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ವನ್ನು ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲು ಮತ್ತು ಎಲ್ಐಸಿಯ ಐಪಿಒ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ವಿಮಾ ನೌಕರರ ಸಂಘ ರಾಯಚೂರು ವಿಭಾಗ ಸದಸ್ಯರು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸರ್ಕಾರದ ಆರಂಭಿಕ ಬಂಡವಾಳ ₹5 ಕೋಟಿ ಇತ್ತು. ಆನಂತರ ಎಲ್ಐಸಿ ತಾನು ಅಂದು ಸ್ವಾಧೀನಪಡಿಸಿಕೊಂಡ ಹಿಂದಿನ ಕಂಪನಿಗಳ ವಿಮಾದಾರರಿಗೆ ಈ ಆರಂಭಿಕ ಬಂಡವಾಳಕ್ಕಿಂತ ಅತಿ ಹೆಚ್ಚಿನ ಪರಿಹಾರವನ್ನು ಪಾವತಿಸಿದೆ. ಪಾಲಸಿದಾರರು ಎಲ್ಐಸಿಯ ನಿಜವಾದ ಮಾಲೀಕರು. ಪಾಲಿಸಿದಾರರ ಉಳಿತಾಯದ ಹಣದ ಮೂಲಕ ರಚಿಸಲಾದ ಎಲ್ಐಸಿಯ ಅಪಾರ ಮೌಲ್ಯವನ್ನು ಕೆಲವೇ ಹೂಡಿಕೆದಾರರಿಗೆ ಹಸ್ತಾಂತರಿಸಲು ಹೊರಟಿದೆ.ರ್ಕಾರದ ನೀತಿಯ ವಿರುದ್ಧ ನಾವು ಪ್ರತಿಭಟನೆ ಮಾಡಲೇಬೇಕಾಗಿದೆ ಎಂದರು.
ಹಣಕಾಸು ವರ್ಷದ ವಿತ್ತೀಯ ಕೊರತೆ ಸರಿದೂಗಿಸುವ ನೆಪದಲ್ಲಿ ಎಲ್ಐಸಿಯ ಷೇರುಗಳನ್ನು ಮಾರಾಟ ಮಾಡಲು ಸರ್ಕಾರದ ಹತಾಶ ಪ್ರಯತ್ನ ಮಾಡುತ್ತಿದೆ .ಎಲ್ಐಸಿಯ ಮೌಲ್ಯವನ್ನು %15 ಲಕ್ಷ ಕೋಟಿಗಳಿಂದ ₹6 ಲಕ್ಷ ಕೋಟಿಗೆ ಇಳಿಸಲಾಗಿದ್ದು, ಇದು ಕೋಟ್ಯಾಂತರ ಪಾಲಿಸಿದಾರರ ಮತ್ತು ಇಷ್ಟೂ ವರ್ಷಗಳಿಂದ ಎಲ್ಐಸಿಯನ್ನು ಬೆಂಬಲಿಸಿದ ಈ ದೇಶದ ಜನತೆಯ ದೃಢ ನಂಬಿಕೆ ಮತ್ತು ವಿಶ್ವಾಸಕ್ಕೆ ನೀಡಿದ ಆಘಾತವಾಗಿದೆ ಎಂದು ಹೇಳಿದರು.
ಎಲ್ಐಸಿಯ ಐಪಿಒ ಎನ್ನುವುದು ಸಂಸ್ಥೆಯ ಖಾಸಗೀಕರಣದ ಮೊದಲ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ. ನವ ಉದಾರವಾದಕ್ಕೆ ಬದ್ಧವಾಗಿರುವ ಈ ಸರ್ಕಾರ ಎಲ್ಐಸಿಯ ಶೇ 3.5 ಷೇರುಗಳನ್ನು ವಿಕ್ರಯಗೊಸಿದರೂ ಸುಮ್ಮನಿರುವುದಿಲ್ಲ. ಏಕೆಂದರೆ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಮತ್ತು ಸಾರ್ವಜನಿಕ ವಿಮಾ ಕಂಪನಿಗಳ ವಿಷಯದಲ್ಲಿ ಸರ್ಕಾರದ ನಿಲುವುಗಳು ಬದಲಾಗುತ್ತಿವೆ. ಇದನ್ನು ಹೋರಾಟದಿಂದ ಎರುರಿಸಬೇಕು ಎಂದು ತಿಳಿಸಿದರು.
ರಾಯಚೂರು ವಿಭಾಗದ ವಿಮಾ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಎಂ.ರವಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.