
ಸಿಂಧನೂರು: ‘ಬೀದಿಬದಿ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹೇಳಿದರು.
ನಗರದ ವಾರ್ಡ್ ನಂ.6 ಕಾಟಿಬೇಸ್ನ ಮಸ್ಜೀದ್-ಏ-ಹುದಾದಲ್ಲಿ ಶನಿವಾರ ಏರ್ಪಡಿಸಿದ್ದಅನುಗ್ರಹ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ನೂತನ ಸಹಕಾರಿ ಸಂಘವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಿ, ಅವರ ಜೀವನ ರೂಪಿಸಬೇಕು. ಇದರಿಂದ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ’ ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ‘40 ವರ್ಷಗಳಿಂದ ತಾವು ಸಹಕಾರಿ ಸಂಸ್ಥೆಗಳ ಹಲವಾರು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ ಇಂತಹ ಬಡ್ಡಿ ರಹಿತ ಸಹಕಾರಿ ಕಾರ್ಯಕ್ರಮ ಇದೇ ಮೊದಲು. ಮೀಟರ್ ಬಡ್ಡಿ ವ್ಯವಹಾರ ದೇವರು ಮೆಚ್ಚುವುದಿಲ್ಲ. ಸಂಸ್ಥೆ ನಮ್ಮದೆಂದು ಬೆಳೆಸಬೇಕು. ಒಳ್ಳೆಯ ಉದ್ಧೇಶ, ಬಡವರು ಬದುಕಬೇಕು ಎಂಬ ದೃಷ್ಟಿಕೋನದೊಂದಿಗೆ ಈ ಸಂಸ್ಥೆ ಕಾರ್ಯನಿರ್ವಹಿಸಲಿ’ ಎಂದು ಸಲಹೆ ನೀಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಯೂಸೂಫ್ ಕನ್ನಿ ಮಾತನಾಡಿ, ‘ಪ್ರತಿಯೊಬ್ಬರೂ ಹಲವು ಸಮಸ್ಯೆಗಳಿಂದ ತೊಂದರೆಗೆ ಈಡಾಗಿದ್ದಾರೆ. ಸಂಸ್ಥೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿರುವುದು ಸಂತಸದ ಸಂಗತಿ. ಇಂತಹ ಸಂಸ್ಥೆಗಳು ಕರ್ನಾಟಕದಲ್ಲಿ 15 ಇವೆ’ ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಸಹುಲತ್ ಸೊಸೈಟೀಸ್ ನವದೆಹಲಿ ಸಿಇಒ ಉಸಾಮಾ ಖಾನ್, ಇಮ್ತಿಯಾಜ್ ಬೇಗ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಟರಾಜ, ಮೌಲಾನಾ ಮುಹಮ್ಮದ್ ತಾಜೀಮುದ್ದೀನ್ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಹುಸೇನಸಾಬ ಅಧ್ಯಕ್ಷತೆ ವಹಿಸಿದ್ದರು. ಬಾಬರ ಪಾಷಾ ವಕೀಲ, ಮಿಲಾಪ್ ಶಾದಿಮಹಲ್ ಅಧ್ಯಕ್ಷ ಖಾಜಿ ಜಿಲಾನಿ ಪಾಷಾ, ಸಹಾಯಕ ಸಹಕಾರ ಸಂಘಗಖ ಲೆಕ್ಕಪರಿಶೋಧನಾ ಇಲಾಖೆ ನಿರ್ದೇಶಕ ಮಹೆಬೂಬ ಆರ್., ಮುಖಂಡರಾದ ಮೌಲಾನಾ ಬೈಸರ್ ಖಾದ್ರಿ, ಹಾರೂನ್ ಪಾಷ ಜಾಗೀರದಾರ, ಅಲ್ತಾಫ್ ಸಾಬ್ ಸಾಹುಕಾರ ಮುಳ್ಳೂರು, ಅನ್ವರ್ ಪಾಶಾ ಉಮರಿ ಉಪಸ್ಥಿತರಿದ್ದರು. ರಾಜಹುಸೇನ್ ಕುರಾನ್ ಪಠಣ ಮಾಡಿದರು. ಯಾಖೂಬ ಅಲಿ ಸ್ವಾಗತಿಸಿದರು. ಡಾ.ಬಸವರಾಜ ನಾಯಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.