ಮಸ್ಕಿ: ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಸ್ವಗ್ರಾಮಕ್ಕೆ ಬಂದ ಕೂಲಿ ಕಾರ್ಮಿಕನ ಮಗಳು ಕಮಲಾಕ್ಷಿಗೆ ಹುಟ್ಟೂರಾದ ತಾಲ್ಲೂಕಿನ ತೀರ್ಥಭಾವಿ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡು ಸನ್ಮಾನಿಸಿದರು.
ಚಿನ್ನದ ಪದಕ ಪಡೆದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಬಂದ ವಿದ್ಯಾರ್ಥಿಯನ್ನು ಗ್ರಾಮದ ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು. ನಂತರ ಗ್ರಾಮದ ಕಟ್ಟೆ ಮೇಲೆ ಇಡೀ ಗ್ರಾಮದ ಜನರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿಕೊಂಡು ಚಿನ್ನದ ಪದಕ ಪಡೆದು ಗ್ರಾಮದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಹಬ್ಬಿಸಿದ ಕಮಲಾಕ್ಷಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ ಮಾತನಾಡಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಗ್ರಾಮ ಪಂಚಾಯಿತಿಯಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿನಿಯ ತಂದೆ ದ್ಯಾಮನಗೌಡ. ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜಪ್ಪಗೌಡ, ಕರಿಯಪ್ಪ, ವೀರೇಶ ತಳವಾರ, ಹನುಮಂತ ಸಿರವಾರ, ಸಂಗನಗೌಡ ಮಾಲಿ ಪಾಟೀಲ್ ದಳಪತಿ, ಚಿದಾನಂದಪ್ಪ ಸಿರವಾರ, ಕನಕರಾಯ ಸಜ್ಜಲಗುಡ್ಡ, ಮಂಜುನಾಥ ಮಾಲಿ ಪಾಟೀಲ್, ಅಮರಪ್ಪ ಮಾಸ್ತರ, ಸಣ್ಣಪ್ಪ ಸುಲ್ತಾನಪೂರ, ಅಮರೇಶ ಮಸ್ಕಿಯ ಭಗತ್ ಸಿಂಗ್ ತರಬೇತಿ ಸಂಸ್ಥೆಯ ಸಂಚಾಲಕ ಲಕ್ಷ್ಮಣ ಇದ್ದರು.
ಕಮಲಾಕ್ಷಿ, ದೆಹಲಿಯಲ್ಲಿ ನಡೆದ 800 ಮೀಟರ್ ಓಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಕಮಲಾಕ್ಷಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
***
ರಾಷ್ಟ್ರೀಯ ಚಾಂಪಿಯನ್ ಆಗುವ ಕನಸು
ಮೊದಲಿನಿಂದಲೂ ನನಗೆ ಕ್ರೀಡೆಗಳಲ್ಲಿ ಆಸಕ್ತಿ ಇದೆ. ನಾನು ಅಥ್ಲೆಟಿಕ್ನಲ್ಲಿ ಗಳಿಸಿರುವ ಚಿನ್ನದ ಪದಕವನ್ನು ನನ್ನೂರಿಗೆ ಹಾಗೂ ನನಗೆ ಸಹಕಾರ ನೀಡಿದ ಎಲ್ಲರಿಗೂ ಅರ್ಪಿಸುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಬೇಕು ಎಂಬ ಕನಸು ನನಗಿದೆ
–ಕಮಲಾಕ್ಷಿ, ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.