ದೇವದುರ್ಗ: ‘ಜನಸಾಮಾನ್ಯನ ಸಮಸ್ಯೆಗಳಿಗೆ, ಅಸಹಾಯಕತೆಗೆ ಧ್ವನಿ ಆಗುತ್ತಿರುವುದು ಪತ್ರಿಕೆಗಳು ಮಾತ್ರ’ ಪತ್ರಕರ್ತ ದಶರಥ ಸಾವೂರು ಹೇಳಿದರು.
ಪಟ್ಟಣದ ಮುರಿಗೇಪ್ಪ ಖೇಣದ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ತಾಲ್ಲೂಕು ಘಟಕ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪತ್ರಿಕೆಗಳು ಜನರ ನೋವು, ಸಂಕಟ, ರೈತರು ಸಮಸ್ಯೆಗಳಿಗೆ ದನಿಯಂತೆ, ಮಹಿಳೆಯರು, ದಲಿತರು ಮತ್ತು ಬಡವರ ಬಗೆಗಿನ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು ಪರಿಹಾರ ಒದಗಿಸುವಂತಹ ಮಹತ್ವದ ಕೆಲಸವನ್ನು ಮಾಡುತ್ತಿವೆ. ಮಾಧ್ಯಮ ಮೂಲಕ ಬೆಳೆದ ರಾಜಕಾರಣಿಗಳು ಬೆಳೆದು ಬಂದ ಹಾದಿಯನ್ನೇ ಮರೆತು ಪತ್ರಕರ್ತರನೇ ಟೀಕಿಸುತ್ತಾರೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ನಿಷ್ಪಕ್ಷಪಾತವಾಗಿ ಟೀಕಿಸುವುದು ಪತ್ರಿಕೆಯ ಧರ್ಮ’ ಎಂದರು.
ಆರ್ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ರಾಜಶೇಖರ ನಾಯಕ ಮಾತನಾಡಿ,‘ದೇವದುರ್ಗ ಪತ್ರಿಕಾ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹5 ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು.
ತಾಲ್ಲೂಕಿನ 4 ಜನ ಯುವ ಪತ್ರಕರ್ತರಾದ ಮಹಾಂತೇಶ ಹೀರೆಮಠ, ನಾಗರಾಜ ಮನ್ನಾಪೂರಿ, ನಿರಂಜನ್ ಮಸರಕಲ್ ಮತ್ತು ಸಚ್ಚಿದಾನಂದ ನಾಯಕ ಅವರಿಗೆ ಮಾಜಿ ಸಂಸದ ಎ.ವೆಂಕಟೇಶ ನಾಯಕ ಸ್ಮರಣಾರ್ಥವಾಗಿ ಕೊಡ ಮಾಡುವ ದುರ್ಗದ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಲ್ಲೂಕು ಘಟಕ ಅಧ್ಯಕ್ಷ ಬಾಬು ಅಲಿ ಕರಿಗುಡ್ಡ, ಕಾರ್ಯದರ್ಶಿ ನಾಗರಾಜ ಸುಟ್ಟಿ, ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಶಾಂತಪ್ಪ ಹೆಂಬೆರಾಳ, ಜೆಡಿಎಸ್ ನಾಯಕಿ ಗೌರಿ, ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ ಬುಂಕಲದೊಡ್ಡಿ, ಪಿಕಾರ್ಡ್ ಅಧ್ಯಕ್ಷ ಶರಣಗೌಡ, ಬಿಇಒ ಪಿ ಮಹಾದೇವಯ್ಯ, ಸಿಪಿಐ ಗುಂಡೂರಾವ್, ಪಿಐ ಮಂಜುನಾಥ, ಕೆಬಿಜೆಎನ್ಎಲ್ ಸಹಾಯಕ ಎಂಜಿನಿಯರ್ ಉಪೇಂದ್ರ ಕುಮಾರ ಮ್ಯಾತ್ರಿ, ಜಿಲ್ಲಾ ಪ್ರತಿನಿಧಿಗಳಾದ ಅಲಿಬಾಬ್ ಪಾಟೀಲ್, ಸೂಗೂರೇಶ ಗುಡಿ, ವಿವಿಧ ಪ್ರಗತಿಪರ, ಕನ್ನಡಪರ, ದಲಿತಪರ ಸಂಘಟನೆ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.