
ಸಿಂಧನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರತ್ಯೇಕ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ, ಅವರಿಂದ 3 ತೊಲೆ ಚಿನ್ನ, 15 ತೊಲೆ ಬೆಳ್ಳಿ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.
ಸಿಂಧನೂರು ಗ್ರಾಮೀಣ ಹಾಗೂ ತುರ್ವಿಹಾಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ನಡೆ ದಿದ್ದವು.
ಸಿಂಧನೂರು ಡಿವೈಎಸ್ಪಿ ಚಂದ್ರಶೇಖರ.ಜಿ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ವಿನಾಯಕ, ಗ್ರಾಮೀಣ ಠಾಣೆ ಪಿಎಸ್ಐ ಮೌನೇಶ ರಾಠೋಡ್, ಬಳಗಾನೂರು ಠಾಣೆ ಪಿಎಸ್ಐ ಎರಿಯಪ್ಪ ಅಂಗಡಿ, ತುರ್ವಿಹಾಳ ಪಿಎಸ್ಐ ಸುಜಾತ, ಸಿಬ್ಬಂದಿ ದೌಲತ್ಸಾಬ್, ಗೋಪಾಲ, ಬಸವರಾಜ, ಅಫೀಜುಲ್ಲಾ, ಅಮರೇಶ, ಮಹೇಶಬಾಬು ಅವರಿದ್ದ ಪ್ರತ್ಯೇಕ ತಂಡಗಳನ್ನು ರಚಿಸಿ, ವಿಶೇಷ ಕಾರ್ಯಾಚರಣೆ ನಡೆಸಿ ಫೆ.13ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ವಿಹಾಳ ಪಟ್ಟಣದ ವಾರ್ಡ್ ನಂ.10ರ ನಿವಾಸಿ ಜಿಲಾನಿ ರಾಜಾಸಾಬ್ನನ್ನು ಬಂಧಿಸಿ, ₹60 ಸಾವಿರ ಮೌಲ್ಯದ 5 ಗ್ರಾಂ ಬಂಗಾರದ ನತ್ತು, ₹60 ಸಾವಿರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಕಳ್ಳತನ ಮಾಡಲು ಉಪಯೋಗಿಸಿದ ₹30 ಸಾವಿರ ಮೌಲ್ಯದ ಹೊಂಡಾ ಯೂನಿಕಾರ್ನ್ ಬೈಕ್ ಸೇರಿ ಒಟ್ಟು ₹1.50 ಲಕ್ಷ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ತಾಲ್ಲೂಕಿನ ಸುಂಕನೂರು ಗ್ರಾಮದ ಶಿವರಾಜ ಹನುಮಮ್ಮ ಎಂಬ ಆರೋಪಿಯನ್ನು ಬಂಧಿಸಿ, 2 ತೊಲೆ ಬಂಗಾರದ ಆಭರಣ, 15 ತೊಲೆ ಬೆಳ್ಳಿಯ ಆಭರಣ ಸೇರಿ ಒಟ್ಟು ₹2.50 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೂರು ಪ್ರಕರಣಗಳಲ್ಲಿ ಒಟ್ಟು ₹4 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದು, ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಅವರು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.