ADVERTISEMENT

ಮಾಗಡಿ‌: ಭೂಮಿ ಹದಗೊಳಿಸುವಾಗ ಪತ್ತೆಯಾಯ್ತು ಪುರಾತನ ಕಾಲದ ಸಿಹಿನೀರಿನ ಬಾವಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:46 IST
Last Updated 12 ಏಪ್ರಿಲ್ 2022, 5:46 IST
ಮಾಗಡಿ ತಾಲ್ಲೂಕಿನ ಕಲ್ಯಾ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿರುವ ಪುರಾತನ ಕಾಲದ ಮಣ್ಣಿನ ಬಳೆಗಳಿಂದ ನಿರ್ಮಿಸಲಾಗಿರುವ ಸಿಹಿನೀರಿನ ಬಾವಿ
ಮಾಗಡಿ ತಾಲ್ಲೂಕಿನ ಕಲ್ಯಾ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿರುವ ಪುರಾತನ ಕಾಲದ ಮಣ್ಣಿನ ಬಳೆಗಳಿಂದ ನಿರ್ಮಿಸಲಾಗಿರುವ ಸಿಹಿನೀರಿನ ಬಾವಿ   

ಮಾಗಡಿ: ತಾಲ್ಲೂಕಿನ ಸರ್ವಧರ್ಮ ಸಮನ್ವಯ ನೆಲೆ ಕಲ್ಯಾದ ಬೆಟ್ಟದ ತಪ್ಪಲಿನ ರೈತನ ಜಮೀನಿನಲ್ಲಿ ಭೂಮಿ ಸಮಗೊಳಿಸುತ್ತಿದ್ದಾಗ ಪುರಾತನ ಕಾಲದ ಮಣ್ಣಿನ ಬಳೆಗಳನ್ನು ಅಳವಡಿಸಿರುವ ಸಿಹಿನೀರಿನ ಬಾವಿ ಪತ್ತೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್‌ ತಿಳಿಸಿದರು.

ಕಲ್ಯಾಬೆಟ್ಟದ ತಪ್ಪಲಿನಲ್ಲಿ ವಿಜಯನಗರ ಅರಸು ಬುಕ್ಕರಾಯನ ಧರ್ಮಸಮನ್ವಯ ಶಿಲಾ ಶಾಸನ ಸುರಕ್ಷಣೆಯ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

‘ಬೌದ್ಧ, ಜೈನ, ವೈಷ್ಣವ, ಶೈವರ ನೆಲೆಯಾಗಿದ್ದ ಕಲ್ಯಾದ ಸಾಂಸ್ಕೃತಿಕ, ಚಾರಿತ್ರಿಕ ಶಿಲಾಶಾಸನ, ವೀರಗಲ್ಲು, ಕೆರೆಕಟ್ಟೆ ಕಲ್ಯಾಣಿಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಪತ್ತೆಯಾಗಿರುವ ಸಿಹಿನೀರಿನ ಬಾವಿಯಲ್ಲಿ ಇಂದಿಗೂ ನೀರಿದ್ದು, ಬಾವಿಯಲ್ಲಿ ಮಣ್ಣಿನ ಬಳೆಗಳನ್ನು ಜೋಡಿಸಿ ಕಟ್ಟಿರುವ ಬಗ್ಗೆ ಇತಿಹಾಸ ಸಂಶೋಧಕರು ಸಂಶೋಧನೆ ಮಾಡುವ ಮೂಲಕ ಬಾವಿಯ ಮಹತ್ವವನ್ನು ಕಂಡುಹಿಡಿಯಬೇಕಿದೆ’ ಎಂದರು.

ADVERTISEMENT

ಇತಿಹಾಸ ಸಂಶೋಧಕರ ಡಾ.ಮುನಿರಾಜಪ್ಪ ಮಾತನಾಡಿ, ‘ಸಿಂದೂಕೊಳ್ಳದ ನಾಗರಿಕತೆಯ ಕಾಲದಲ್ಲಿ ಸುಟ್ಟ ಇಟ್ಟಿಗೆಗಳನ್ನು ಬಳಸಿ, ಸಿಹಿನೀರಿನ ಬಾವಿಗಳನ್ನು ನಿರ್ಮಿಸಲಾಗುತ್ತಿತ್ತು. ಕಲ್ಯಾದ ಚಾರಿತ್ರಿಕ ಅಂಶಗಳು ಸಿಂದೂಕೊಳ್ಳದ ನಾಗರಿಕತೆಯ ಕುರುಹುಗಳನ್ನು ಪ್ರತಿಬಿಂಬಿಸುತ್ತಿದೆ. ದೊರತಿರುವ ಮಣ್ಣಿನ ಬಳೆಗಳಿಂದ ನಿರ್ಮಿಸಲಾಗಿರುವ ಸಿಹಿನೀರಿನ ಬಾವಿಯ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.