ADVERTISEMENT

ಬೆಂಗಳೂರು– ಮೈಸೂರು ಹೆದ್ದಾರಿ: ಸಂಚಾರ ನಿಯಮ ಉಲ್ಲಂಘನೆ, 2 ದಿನದಲ್ಲಿ 490 ಪ್ರಕರಣ

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 0:00 IST
Last Updated 9 ಜುಲೈ 2023, 0:00 IST
ರಾಮನಗರ ಹೊರವಲಯದ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪೊಲೀಸರು, ಸ್ಪೀಡ್ ರಾಡಾರ್ ಮೂಲಕ ಅತಿ ವೇಗದ ವಾಹನಗಳ ಮೇಲೆ ನಿಗಾ ಇಟ್ಟಿರುವುದು
ರಾಮನಗರ ಹೊರವಲಯದ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪೊಲೀಸರು, ಸ್ಪೀಡ್ ರಾಡಾರ್ ಮೂಲಕ ಅತಿ ವೇಗದ ವಾಹನಗಳ ಮೇಲೆ ನಿಗಾ ಇಟ್ಟಿರುವುದು   

ರಾಮನಗರ: ಅಪಘಾತಗಳ ಹೆಚ್ಚಳದ ಬೆನ್ನಲ್ಲೇ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನಗಳ ಅತಿ ವೇಗ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಚಾರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು, ಕೇವಲ ಎರಡು ದಿನಗಳಲ್ಲಿ 490 ಪ್ರಕರಣಗಳನ್ನು ದಾಖಲಿಸಿ ದಂಡದ ಬಿಸಿ ಮುಟ್ಟಿಸಿದ್ದಾರೆ.

ಜುಲೈ 6ರಿಂದ ಎಕ್ಸ್‌ಪ್ರೆಸ್ ವೇನಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಮೊದಲ ದಿನ 44 ಚಾಲಕರ ವಿರುದ್ಧ ಹಾಗೂ ಎರಡನೇ ದಿನ 446 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಾಹನಗಳ ಸಂಚಾರಕ್ಕೆ ಎಕ್ಸ್‌ಪ್ರೆಸ್ ವೇ ಮುಕ್ತವಾದ ಬಳಿಕ, ಒಂಬತ್ತು ತಿಂಗಳಲ್ಲಿ ಸಂಭವಿಸಿದ 550ಕ್ಕೂ ಹೆಚ್ಚು ಅಪಘಾತಗಳಲ್ಲಿ 158ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅತಿ ವೇಗವಾದ ಚಾಲನೆ, ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ, ಮೂಲಸೌಕರ್ಯ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಪಘಾತ ಸಂಭವಿಸುತ್ತಿವೆ ಎಂಬ ಟೀಕೆಗಳು ಕೇಳಿ ಬಂದಿದ್ದವು.

ADVERTISEMENT

ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು. ಅದರ ಬೆನ್ನಲ್ಲೇ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್‌ಪ್ರೆಸ್‌ ವೇಯ ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಪಘಾತಕ್ಕೆ ಕಾರಣವಾಗಿರುವ ಅಂಶಗಳು ಹಾಗೂ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದ್ದ ವರದಿಯನ್ನ ಪರಿಶೀಲಿಸಿ, ಸಭೆ ಕೂಡ ನಡೆಸಿದ್ದರು.

ಎಡಿಜಿಪಿ ಭೇಟಿ ಬಳಿಕ ಎಕ್ಸ್‌ಪ್ರೆಸ್‌ ವೇನಲ್ಲಿ ಸ್ಪೀಡ್ ರಾಡಾರ್‌ ವಾಹನಗಳ ಮೂಲಕ, ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿ.ಮೀ ಮೀರಿ ಅತಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲಾಗಿತ್ತು. ರಸ್ತೆಯಲ್ಲಿ ಪೊಲೀಸ್ ಗಸ್ತು ವಾಹನಗಳನ್ನು ಆರಂಭಿಸಲಾಗಿತ್ತು.

ಸಂಚಾರ ನಿಯಮ ಉಲ್ಲಂಘನೆಯೇ ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತಕ್ಕೆ ಕಾರಣ. ಹಾಗಾಗಿ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು
– ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.