ADVERTISEMENT

ಬಸ್ ಟಿಕೆಟ್ ರದ್ದು: ಟ್ರಾವೆಲ್ಸ್‌ ಸಂಸ್ಥೆಗೆ ₹10 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 3:02 IST
Last Updated 6 ನವೆಂಬರ್ 2025, 3:02 IST
Consumer court
Consumer court   

ರಾಮನಗರ: ವೈಕುಂಠ ಏಕಾದಶಿಯಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವುದಕ್ಕಾಗಿ ಬುಕ್ಕಿಂಗ್ ಮಾಡಿದ್ದ ಮೂರು ಬಸ್ ಟಿಕೆಟ್ ಅನ್ನು ಏಕಾಏಕಿ ರದ್ದುಪಡಿಸಿ, ಭಕ್ತರೊಬ್ಬರ ಧಾರ್ಮಿಕ ಹಕ್ಕು ಉಲ್ಲಂಘಿಸಿದ್ದಕ್ಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಇತ್ತೀಚೆಗೆ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಗ್ರೀನ್‌ಲೈನ್ ಟ್ರಾವೆಲ್ಸ್ ಮತ್ತು ಹಾಲಿಡೇಸ್ ಸಂಸ್ಥೆಗೆ ₹10 ಸಾವಿರ ದಂಡ ವಿಧಿಸಿದೆ.

ವಿವೇಕಾನಂದನಗರದ ಚಂದ್ರಮೋಹನ್ ಜೆ. ದೂರುದಾರರು. ವೈಕುಂಠ ಏಕಾದಶಿಯಂದು ತಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತಮ್ಮಿಬ್ಬರು ಸ್ನೇಹಿತರೊಂದಿಗೆ ಜ. 9ರಂದು ತೆರಳಲು ಚಂದ್ರಮೋಹನ್ ನಿರ್ಧರಿಸಿದ್ದರು. ಅದಕ್ಕಾಗಿ ಗ್ರೀನ್‌ಲೈನ್ ಸಂಸ್ಥೆಯ ಹವಾನಿಯಂತ್ರಿತ ಸ್ಲೀಪರ್ ಬಸ್‌ಗೆ 3 ಟಿಕೆಟ್‌ಗಳನ್ನು ಒಂದು ತಿಂಗಳು ಮುಂಚೆಯೇ ಬುಕ್ಕಿಂಗ್ ಮಾಡಿದ್ದರು.

ತಿರುಪತಿಗೆ ತೆರಳಲು ನಾಲ್ಕು ದಿನ ಇರುವಾಗ ಟಿಕೆಟ್ ರದ್ದಾಗಿದೆ ಎಂದು ಸಂಸ್ಥೆ ಅ. 4ರಂದು ಚಂದ್ರಮೋಹನ್ ಅವರ ಮೊಬೈಲ್‌ ಫೋನ್‌ಗೆ ಸಂದೇಶ ಕಳಿಸಿತ್ತು. ಬುಕ್ಕಿಂಗ್ ದಿನವಾದ ಜ. 9ರಿಂದ 18ರವರೆಗೆ ತಿರುಪತಿಯಲ್ಲಿ ದರ್ಶನ ರದ್ದಾಗಿದೆ. ಹಾಗಾಗಿ, ತಮ್ಮ ಬುಕ್ಕಿಂಗ್ ಮೊತ್ತ ಹಿಂದಿರುಗಿಸುವುದಾಗಿ ಸಂಸ್ಥೆ ಹೇಳಿತ್ತು.

ADVERTISEMENT

ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡದ ಸಂಸ್ಥೆಯು, ದೇವರ ದರ್ಶನದ ಆಸೆಗೆ ತಣ್ಣೀರು ಎರಚಿದೆ. ಮತ್ತೆ ವೈಕುಂಠ ಏಕಾದಶಿಯಂದು ದರ್ಶನ ಮಾಡಲು ಒಂದು ವರ್ಷ ಕಾಯಬೇಕು. ಸಂಸ್ಥೆಯಿಂದಾಗಿ ತಮ್ಮ ಧಾರ್ಮಿಕ ಹಕ್ಕು ಉಲ್ಲಂಘನೆ ಜೊತೆಗೆ ಮಾನಸಿಕವಾಗಿ ನೋವಾಗಿದೆ.

ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ ಟಿಕೆಟ್ ದರ ಏರಿಸಿಕೊಳ್ಳುವುದಕ್ಕಾಗಿ ಸಂಸ್ಥೆಯು ದೇವರ ದರ್ಶನ ರದ್ದಾಗಿದೆ ಎಂದು ಸುಳ್ಳು ಹೇಳಿದೆ ಎಂದು ಚಂದ್ರಮೋಹನ್ ದೂರಿದ್ದರು. ಸಂಸ್ಥೆ ಹಿಂದೆಯೂ ಇದೇ ರೀತಿ ನಡೆದುಕೊಂಡಿದೆ. ಈಗಲೂ ಉದ್ದೇಶಪೂರ್ವಕವಾಗಿಯೇ ಟಿಕೆಟ್ ರದ್ದಾಗಿದೆ ಎಂದು ಹೇಳುವ ಮೂಲಕ ನಮಗೆ ಮಾನಸಿಕವಾಗಿ ನೋವುಂಟು ಮಾಡಿ, ಸೇವಾ ನ್ಯೂನ್ಯತೆ ಎಸಗಿದೆ. ಇದಕ್ಕೆ ₹30 ಲಕ್ಷ ಪರಿಹಾರ ನೀಡಬೇಕು ಎಂದು ಚಂದ್ರಮೋಹನ್ ಅವರು ಆಯೋಗಕ್ಕೆ ಮಾರ್ಚ್ 4ರಂದು ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ಆಯೋಗವು ಸಂಸ್ಥೆಗೆ ಮಾರ್ಚ್ 13ರಂದು ನೋಟಿಸ್ ಜಾರಿಗೊಳಿಸಿತ್ತು. ಆಯೋಗದ ಪ್ರಭಾರ ಅಧ್ಯಕ್ಷೆ ರೇಣುಕಾದೇವಿ ದೇಶಪಾಂಡೆ ಮತ್ತು ಮಹಿಳಾ ಸದಸ್ಯೆ ಲತಾ ಎಂ.ಎಸ್ ಅವರು, ಎರಡೂ ಕಡೆಯವರ ವಾದವನ್ನು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ್ದರು. ಟ್ರಾವೆಲ್ಸ್ ಸಂಸ್ಥೆಯುವರು ಹೇಳಿದಂತೆ ತಿರುಪತಿಯಲ್ಲಿ ದರ್ಶನ ರದ್ದಾಗಿರುವುದಕ್ಕೆ ಸೂಕ್ತ ದಾಖಲೆಗಳು ಇರಲಿಲ್ಲ.

ಗ್ರಾಹಕ ಸಂರಕ್ಷಣಾ ಕಾಯ್ದೆ–2019ರ ಕಲಂ–35ರ ಅನ್ವಯ ಅರ್ಜಿದಾರರ ಮನವಿಯನ್ನು ಭಾಗಶಃ ಪುರಸ್ಕರಿಸಿದ್ದರು. ದೂರುದಾರರಿಗೆ ಪರ್ಯಾವ ವ್ಯವಸ್ಥೆ ಕಲ್ಪಿಸದ ಸಂಸ್ಥೆಯು ಮಾನಸಿಕ ಹಿಂಸೆಯಾಗುವಂತೆ ಮಾಡಿ, ಧಾರ್ಮಿಕ ಹಕ್ಕಿನ ಉಲ್ಲಂಘನೆ ಮಾಡಿದೆ ಎಂಬ ತೀರ್ಮಾನ ಕೈಗೊಂಡಿದ್ದರು.

ಅದಕ್ಕಾಗಿ ₹10 ಸಾವಿರ ಪರಿಹಾರ ಮತ್ತು ನ್ಯಾಯಾಲಯದ ಖರ್ಚು ₹2 ಸಾವಿರ ಸೇರಿದಂತೆ ಒಟ್ಟು ₹12 ಸಾವಿರವನ್ನು ದೂರು ದಾಖಲಿಸಿದ ದಿನಾಂಕದಿಂದ 45 ದಿನದೊಳಗೆ ಶೇ 6ರಷ್ಟು ಬಡ್ಡಿಯೊಂದಿಗೆ ಸಂಸ್ಥೆಯು ದೂರುದಾರ ಚಂದ್ರಮೋಹನ್ ಅವರಿಗೆ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ 8ರಷ್ಟು ಬಡ್ಡಿಯಂತೆ ಮರು ಪಾವತಿಸಬೇಕು ಎಂದು ಆದೇಶ ನೀಡಿದರು.

ಪ್ರಕರಣದ ವಿಚಾರಣೆಯು 7 ತಿಂಗಳು 27 ದಿನ ನಡೆಯಿತು. ದೂರುದಾರ ಚಂದ್ರಮೋಹನ್ ಪರವಾಗಿ ವಕೀಲ ಶ್ರೀಧರ ಎಚ್.ಡಿ ಮತ್ತು ಎದುರಾರರ ಗ್ರೀನ್‌ ಲೈನ್ ಟ್ರಾವೆಲ್ಸ್ ಸಂಸ್ಥೆ ಪರವಾಗಿ ವಕೀಲ ಆರ್. ಹೊಂಬೇಗೌಡ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.