ಚನ್ನಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಪೆಟ್ರೋಲ್ ಬಂಕ್ ಆವರಣದಲ್ಲಿ ನಿಂತ ಮಳೆ ನೀರು
ಚನ್ನಪಟ್ಟಣ: ನಗರದ ಸುತ್ತಮುತ್ತ ಶನಿವಾರ ಸಂಜೆ ತಾಸಿಗೂ ಹೆಚ್ಚು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಬೆಂಗಳೂರು–ಮೈಸೂರು ಹೆದ್ದಾರಿ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಹೊಳೆಯಂತಾಗಿದ್ದವು.
ಸಂಜೆ 4ಕ್ಕೆ ಆರಂಭವಾದ ಮಳೆ ತಾಸಿಗೂ ಹೆಚ್ಚು ಮುಂದುವರೆಯಿತು. ಗುಡುಗು, ಮಿಂಚು, ಗಾಳಿ ಆರ್ಭಟ ಇರಲಿಲ್ಲ. ಈ ವರ್ಷದಲ್ಲಿ ಸುರಿದ ದೊಡ್ಡ ಮಳೆ ಇದಾಗಿದೆ.
ರೈಲು ನಿಲ್ದಾಣದ ಬಳಿಯ ಚರಂಡಿಗಳ ನೀರು ಉಕ್ಕಿ ರೈಲ್ವೆ ಸ್ಟೇಷನ್ ಒಳಗೆ ನುಗ್ಗಿತು. ಹಳಿಗಳ ಮೇಲೆ ನೀರು ಸಂಗ್ರಹವಾಗಿ ಕೆರೆಯಂತಾಯಿತು. ಇದರಿಂದ ರೈಲುಗಳು ನಿಧಾನವಾಗಿ ಚಲಿಸಿದವು.
ಗಾಂಧಿ ಭವನ, ಪಕ್ಕದ ಪೆಟ್ರೋಲ್ ಬಂಕ್, ರೇಷ್ಮೆ ಮಾರುಕಟ್ಟೆ, ತಾಲ್ಲೂಕು ಪಂಚಾಯತಿ ಹಾಗೂ ತಾಲ್ಲೂಕು ಕಚೇರಿ ಆವರಣಕ್ಕೂ ನುಗ್ಗಿತು. ಅಂಗಡಿ, ಮುಂಗಟ್ಟುಗಳಿಗೆ ನೀರು ನುಗ್ಗಿ, ಅಂಗಡಿಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲಾಡಿದವು. ಅಂಗಡಿಯಲ್ಲಿದ್ದ ನೀರು ಹೊರ ಹಾಕಲು ವರ್ತಕರು ಹೆಣಗಾಡಿದರು.
ಹೆದ್ದಾರಿ ಮತ್ತು ರಸ್ತೆಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್, ಕಾರು, ಬಸ್ ಹಾಗೂ ಇತರ ವಾಹನಗಳು ಮುಂದೆ ಚಲಿಸಲು ಸಾಧ್ಯವಾಗದೆ ಮಧ್ಯೆದಲ್ಲಿಯೇ ಸಾಲುಗಟ್ಟಿ ನಿಂತಿದ್ದವು. ಬೈಕ್, ಕಾರುಗಳು ನೀರಿನಲ್ಲಿ ಮುಳುಗಿದ್ದವು.
ನಗರದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗ ವಾರ್ಡ್ಗಳಿಗೂ ನೀರು ನುಗ್ಗಿ ರೋಗಿಗಳು ಪರದಾಡುವಂತಾಯಿತು. ಶೆಟ್ಟಿಹಳ್ಳಿ ಕೆರೆ ಸ್ವಚ್ಛತೆ ಕಾರ್ಯ ನಡೆಯುತ್ತಿದ್ದು ಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆನೀರು ಹೊರ ಬಿಡಲು ಕೆರೆಯ ಏರಿ ಒಡೆಯಲಾಗಿತ್ತು. ಕೆರೆಗೆ ಹರಿದು ಬಂದ ಮಳೆ ನೀರು ಒಡೆದಿರುವ ಏರಿಯ ಮೂಲಕ ಮತ್ತೆ ಹೊರಗೆ ಹರಿಯಿತು. ಇದರಿಂದ ನಗರದ ರಾಜಾ ಕೆಂಪೇಗೌಡ ಬಡಾವಣೆಯ ಕೆಲವು ಮನೆಗಳು ನೀರಿನಿಂದ ಆವೃತವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.