ADVERTISEMENT

ಚನ್ನಪಟ್ಟಣ: ಡಿ.ಕೆ.ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ ಭಾವ ‘ಶರತ್ ಚಂದ್ರ’

​ಪ್ರಜಾವಾಣಿ ವಾರ್ತೆ
Published 26 ಮೇ 2022, 6:13 IST
Last Updated 26 ಮೇ 2022, 6:13 IST
ಶರತ್ ಚಂದ್ರ ಮತ್ತು ಡಿ.ಕೆ.ಶಿವಕುಮಾರ್
ಶರತ್ ಚಂದ್ರ ಮತ್ತು ಡಿ.ಕೆ.ಶಿವಕುಮಾರ್   

ಚನ್ನಪಟ್ಟಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸ್ವಂತ ಭಾವ ಶರತ್ ಚಂದ್ರ ಬಂಡಾಯದ ಬಾವುಟ ಹಾರಿಸಿದ್ದಾರೆ.

‘ಡಿಕೆಎಸ್ ಸೋದರ ಭಾವ ಕೆಪಿಸಿಸಿ ಸದಸ್ಯ ಶರತ್ ಚಂದ್ರ, ಚನ್ನಪಟ್ಟಣ ಕ್ಷೇತ್ರದಲ್ಲಿ ಹೀನಾಯಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಕಳೆದ 5 ವರ್ಷಗಳಿಂದ ಸಂಘಟಿಸಿದ್ದೇನೆ. ಆದರೆ, ಇದೀಗ ಯಾರನ್ನೋ ಅಭ್ಯರ್ಥಿ ಎಂದು ಕರೆದುಕೊಂಡು ಬಂದಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕೆ ನನ್ನ ಸಂಬಂಧಿಕರೇ ಮುಳುವಾಗಿದ್ದಾರೆ’ ಎಂದು ಡಿಕೆಎಸ್ ಸೋದರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

‘ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವ ಡಿಕೆಶಿ ಸಹೋದರರು ಅವರ ಕುಟುಂಬಸ್ಥರಾದ ಎಸ್.ರವಿ ಅನ್ನು ಎಂಎಲ್‌ಸಿ ಮಾಡಿಕೊಂಡಿದ್ದಾರೆ. ಅವರ ಸಂಬಂಧಿ ಡಾ.ರಂಗನಾಥ್ ಅನ್ನು ಕುಣಿಗಲ್‌ನಿಂದ ಟಿಕೆಟ್ ಕೊಟ್ಟು ಶಾಸಕರನ್ನಾಗಿ ಮಾಡಿಕೊಂಡಿದ್ದಾರೆ. ಆದರೆ, ನನಗೆ ಟಿಕೆಟ್ ನೀಡುವ ವಿಚಾರದಲ್ಲಿ ಮಾತ್ರ ಕುಟುಂಬ ರಾಜಕಾರಣ ಇವರಿಗೆ ಅಡ್ಡ ಬರುತ್ತದೆ’ ಎಂದು ಅವರು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

‘2013ರಲ್ಲಿ ಡಿ.ಕೆ.ಸುರೇಶ್ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಕ್ಷೇತ್ರದಲ್ಲಿ ಯಾವುದೇ ನಾಯಕರು ಇರಲಿಲ್ಲ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಆದರೆ ಇದೀಗ ದುಡಿಸಿಕೊಂಡು ನನ್ನ ಕೈ ಬಿಟ್ಟರು’ ಎಂದರು.

‘2018ರಲ್ಲಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದಾಗ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಕೆಪಿಸಿಸಿಯಿಂದ ನನ್ನದೊಂದೇ ಹೆಸರು ಎಐಸಿಸಿಗೆ ಶಿಫಾರಸ್ಸಾಗಿತ್ತು. ಆದರೂ ನನಗೆ ಕೊನೆಕ್ಷಣದಲ್ಲಿ ಟಿಕೇಟ್ ನೀಡದೆ ಪಕ್ಷದ ಕ್ಷೇತ್ರದ ಎಚ್.ಎಂ.ರೇವಣ್ಣ ಅವರಿಗೆ ಟಿಕೆಟ್ ನೀಡಿದರು. ಆದರೂ, ನಾನು ಬೇಸರ ಮಾಡಿಕೊಳ್ಳದೆ ಕ್ಷೇತ್ರದಲ್ಲಿ ಸಂಘಟನೆಯನ್ನು ಮುಂದುವರೆಸಿದೆ. ಇದೀಗ ಮತ್ತೆ ಬೇರೆ ಯಾರನ್ನೋ ಕರೆತಂದಿದ್ದಾರೆ. ನಾನೇನು ಸನ್ಯಾಸಿಯಲ್ಲ, ನಮ್ಮ ಕುಟುಂಬಕ್ಕೂ ರಾಜಕೀಯ ಹಿನ್ನೆಲೆಯಿದೆ. ಈ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದು, 2023 ಚುನಾವಣೆಯಲ್ಲಿಸ್ಪರ್ಧೆ ಮಾಡಿದರೆ ಜನರ ಜೊತೆ ಬೆರೆಯಲು, ಜನಸೇವೆ ಮಾಡಲು ಸಹಕಾರವಾಗುತ್ತದೆ. ಇದಕ್ಕಾಗಿ ಸ್ಪರ್ಧೆ ಮಾಡುತ್ತೇನೆ. ಚನ್ನಪಟ್ಟಣ ಕ್ಷೇತ್ರದ ಜನತೆ ಬುದ್ಧಿವಂತರಿದ್ದಾರೆ. ಹೈಕಮ್ಯಾಂಡ್ಅಭ್ಯರ್ಥಿಯ ಬಲ ಹೆಚ್ಚಿದೆಯೋ.., ಈ ತಾಲ್ಲೂಕಿನ ಕಾರ್ಯಕರ್ತರ ಬಲ ಹೆಚ್ಚಿದೆಯೋ ಎಂಬುದನ್ನು ಚುನಾವಣೆಯಲ್ಲಿ ತೋರಿಸುತ್ತೇನೆ. ಬೇರೆ ಪಕ್ಷದಿಂದ ಆಹ್ವಾನ ಬಂದರೆ ಕಾರ್ಯಕರ್ತರ ಜೊತೆಚರ್ಚಿಸಿ ತೀರ್ಮಾನಿಸುತ್ತೇನೆ. ಇಲ್ಲಾ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.