ADVERTISEMENT

ರಾಮನಗರ | ಕಣ್ಮನ ಸೆಳೆಯುತ್ತಿವೆ ಮಣ್ಣಿನ ದೀಪಗಳು..

ಹಬ್ಬಕ್ಕೆ ಪಟಾಕಿ ಸದ್ದಿನ ಜೊತೆಗೆ ದೀಪಗಳ ಮೆರಗು; ಮಾರುಕಟ್ಟೆಯಲ್ಲಿ ವೈವಿಧ್ಯಮಯ ದೀಪಗಳ ಖರೀದಿ ಭರಾಟೆ

ಓದೇಶ ಸಕಲೇಶಪುರ
Published 22 ಅಕ್ಟೋಬರ್ 2025, 8:22 IST
Last Updated 22 ಅಕ್ಟೋಬರ್ 2025, 8:22 IST
ದೀಪಾವಳಿ ಹಬ್ಬದ ಪ್ರಯುಕ್ತ ರಾಮನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಜನರು ಮಣ್ಣಿನ ದೀಪಗಳನ್ನು ಖರೀದಿಸಿದರು
ದೀಪಾವಳಿ ಹಬ್ಬದ ಪ್ರಯುಕ್ತ ರಾಮನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಜನರು ಮಣ್ಣಿನ ದೀಪಗಳನ್ನು ಖರೀದಿಸಿದರು   

ರಾಮನಗರ: ದೀಪಾವಳಿ ಹಬ್ಬವು ದೀಪಗಳ ಹಬ್ಬವೆಂದೇ ಜನಪ್ರಿಯ. ಹಬ್ಬದಂದು ಕಿವಿಗೆ ಸಾಕೆನ್ನುವಷ್ಟು ಪಟಾಕಿಗಳ ಭಾರೀ ಸದ್ದಿನ ಜೊತೆಗೆ ಹಬ್ಬ ಆಚರಿಸುವವರ ಮನೆಯ ಒಳಗೆ ಮತ್ತು ಹೊರಗೆ ದೀಪಗಳ ಮೆರಗು ಕಂಡುಬರುತ್ತದೆ. ಇದೇ ಕಾರಣಕ್ಕೆ ದೀಪಾವಳಿ ಬಂತೆಂದರೆ ವೈವಿಧ್ಯಮಯ ದೀಪಗಳು ಮಾರುಕಟ್ಟೆಗೆ ಬರುತ್ತವೆ.

ಪ್ರತಿ ಸಲದಂತೆ ಈ ಸಲವೂ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಆಕರ್ಷಕ ಮಣ್ಣಿನ ದೀಪಗಳು ಸೇರಿದಂತೆ ವಿವಿಧ ರೀತಿಯ ದೀಪಗಳು ಗಮನ ಸೆಳೆಯುತ್ತಿವೆ. ತೂಗು ದೀಪ, ಗಣೇಶ ದೀಪ, ನವಿಲು ದೀಪ, ಆನೆ ದೀಪ, ಮ್ಯಾಜಿಕ್ ದೀಪ, ಆಮೆ ದೀಪ, ಟಾಪನ್ ಬೇಸ್ ದೀಪ, ಸರ್ಪದ ದೀಪ, ಗಾಳಿಗೆ ಆರದ ದೀಪ, ಸ್ಟ್ಯಾಂಡಿಂಗ್ ಗಣಪತಿ ದೀಪಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ.

ನಗರದ ಹಳೆ ಬಸ್ ನಿಲ್ದಾಣ ವೃತ್ತ, ಮುಖ್ಯ ರಸ್ತೆ, ಎಂ.ಜಿ. ರಸ್ತೆ, ಮಾಗಡಿ ರಸ್ತೆ ಸೇರಿದಂತೆ ವಿವಿಧೆಡೆ ದೀಪಗಳ ಮಾರಾಟ ಮತ್ತು ಖರೀದಿಯ ಭರಾಟೆ ಜೋರಾಗಿದೆ. ಹಬ್ಬದ ಪ್ರಯುಕ್ತ ಜನರು ಎರಡ್ಮೂರು ದಿನಗಳಿಗೂ ಮುಂಚಿನಿಂದಲೇ ದೀಪಗಳ ಖರೀದಿಯಲ್ಲಿ ತೊಡಗಿದ್ದಾರೆ. ದೀಪಾವಳಿ ಪ್ರಯುಕ್ತ ಮಾರುಕಟ್ಟೆಯೂ ಕಳೆಗಟ್ಟಿದೆ.

ADVERTISEMENT

‘ಲೋಕ’ದ ದೀಪಕ್ಕೆ ಬೇಡಿಕೆ: ಜಾನಪದ ಲೋಕದ ಕುಂಬಾರಿಕೆ ವಿಭಾಗದಲ್ಲಿಲ ಕಳೆದ 28 ವರ್ಷಗಳಿಂದ ಕುಂಬಾರಿಕೆ ಜೊತೆಗೆ ಪ್ರವಾಸಿಗರಿಗೆ ಪ್ರಾತ್ಯಕ್ಷಿಕೆ ನೀಡುವ ಆರ್.ವಿ. ಅನಸೂಯ ಬಾಯಿ ಅವರು ದೀಪಾವಳಿ ಹಬ್ಬದ ಪ್ರಯುಕ್ತ ತಯಾರಿಸುವ ದೀಪಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಪ್ರತಿ ದೀಪಾವಳಿಗೂ ಒಂದೊಂದು ರೀತಿಯ ವಿಶೇಷ ದೀಪಗಳನ್ನು ತಯಾರಿಸುವುದು ಇವರ ವಿಶೇಷ.

‘ದೀಪಾವಳಿ ಹಬ್ಬ ಬಂದರೆ ಜಾನಪದ ಲೋಕದಲ್ಲಿರುವ ನಮ್ಮ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕರಕುಶಲ ವಸ್ತು ತಯಾರಿಕೆ ಮಳಿಗೆಯಲ್ಲಿ ಮಣ್ಣಿನ ದೀಪಗಳಿಗೆ ಬೇಡಿಕೆ ಬರುತ್ತದೆ. ಪ್ರತಿ ಸಲ ನಾನೇ ಸ್ವತಃ ತಯಾರಿಸಿ ಮಾರಾಟ ಮಾಡುವೆ. ಕಳೆದ ವರ್ಷ ‘ಸರ್ಪದ ದೀಪ’ ತಯಾರಿಸಿದ್ದೆ. ಈ ವರ್ಷ ‘ಸ್ಟ್ಯಾಂಡಿಂಗ್ ಗಣಪತಿ ದೀಪ’ ಮತ್ತು ‘ಗಾಳಿಗೆ ಆರದ ದೀಪ’ ವಿಶೇಷವಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ’ ಎಂದು ಅನಸೂಯ ಅವರು ತಿಳಿಸಿದರು.

‘ಹಬ್ಬಕ್ಕೆ ಮಣ್ಣಿನ ದೀಪಗಳನ್ನು ಇಡಬೇಕು. ಅದೇ ನಮ್ಮ ನೆಲದ ಸಂಪ್ರದಾಯ. ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ಮಣ್ಣಿನ ದೀಪಗಳನ್ನೇ ತಯಾರಿಸಿ ಮಾರಾಟ ಮಾಡುತ್ತಾ ಬಂದಿದ್ದೇನೆ. ಜಾನಪದ ಲೋಕಕ್ಕೆ ಬರುವ ವಿವಿಧ ಭಾಗ ಹಾಗೂ ರಾಜ್ಯದ ಜನರು ವಿಶೇಷ ದೀಪಗಳನ್ನು ಖರೀದಿಸುತ್ತಾರೆ’ ಎಂದು ಹೇಳಿದರು.

ಮಣ್ಣಿನ ದೀಪವೇ ಸೂಕ್ತ: ‘ನಾನು ಪ್ರತಿ ಸಲ ದೀಪಾವಳಿ ಹಬ್ಬಕ್ಕೂ ಮಣ್ಣಿನ ದೀಪಗಳನ್ನೇ ಖರೀದಿಸುತ್ತೇವೆ. ಪ್ಲಾಸ್ಟಿಕ್, ಪಿಂಗಾಣಿ ಸೇರಿದಂತೆ ಬೇರಾವುದೇ ದೀಪಗಳನ್ನು ತರುವುದಿಲ್ಲ. ಮಣ್ಣಿನ ದೀಪಗಳನ್ನು ನಾವು ಬಳಸಿ ಬಿಸಾಕಿದರೂ ಮಣ್ಣಿನಲ್ಲಿ ಕರಗುತ್ತವೆ. ಪರಿಸರಕ್ಕೆ ಹಾನಿಕಾರಕವಲ್ಲ. ಮಣ್ಣಿನ ದೀಪವು ಹಬ್ಬ ಮೆರಗು ತರುವ ಜೊತೆಗೆ ಪರಿಸರ ಸ್ನೇಹಿಯೂ ಆಗಿದೆ’ ಎಂದು ಗೃಹಿಣಿ ಮೇಘನಾ ಅವರು ಅಭಿಪ್ರಾಯಪಟ್ಟರು.

ರಾಮನಗರದ ಜಾನಪದ ಲೋಕದಲ್ಲಿ ಮಣ್ಣಿನ ವಿಶೇಷ ದೀಪಗಳಿಗೆ ಅಂತಿಮ ಸ್ಪರ್ಶ ನೀಡಿದ ಆರ್.ವಿ. ಅನಸೂಯ ಬಾಯಿ
ಗಮನ ಸೆಳೆದ ಅನಸೂಯ ಬಾಯಿ ಅವರು ತಯಾರಿಸಿರುವ ಸ್ಟ್ಯಾಂಡಿಂಗ್ ಗಣಪತಿ ದೀಪಗಳು
ರಾಮನಗರದ ಹಳೆ ಬಸ್ ನಿಲ್ದಾಣ ವೃತ್ತದ ಬಳಿ ದೀಪಗಳ ಖರೀದಿಯಲ್ಲಿ ತೊಡಗಿದ್ದ ಬಾಲಕ

ಬೆಳಕಿನ ಹಬ್ಬ ದೀಪಾವಳಿಗೆ ಹೆಚ್ಚಿದ ದೀಪಗಳ ಖರೀದಿ ‘ಜಾನಪದ ಲೋಕ’ದ ದೀಪಗಳಿಗೆ ಹೆಚ್ಚಿದ ಬೇಡಿಕೆ ಪರಿಸರ ಸ್ನೇಹಿ ಮಣ್ಣಿನ ದೀಪಗಳನ್ನೇ ಬಳಸಲು ಸಲಹೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.