
ಮಾಗಡಿ: ತಾಲ್ಲೂಕಿನ ಗುಡೇಮಾರನಹಳ್ಳಿಯಲ್ಲಿ ಗುರುವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಅವರ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬೆಳಗುಂಬ ಗ್ರಾಮದ ರಾಜೇಶ್ (27) ಮೃತರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಅವರು, ಕೆಲಸ ಮುಗಿಸಿಕೊಂಡು ರಾತ್ರಿ 10ರ ಸುಮಾರಿಗೆ ಮನೆಗೆ ವಾಪಸ್ಸಾಗುತ್ತಿದ್ದರು.
ಈ ವೇಳೆ, ಮಾಗಡಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಶಶಾಂಕ್ ಅವರಿದ್ದ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ರಾಜೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಕುದೂರು ಠಾಣೆ ಪೊಲೀಸರು, ಶವವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ನಡೆದಾಗ ಶಶಾಂಕ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಮೃತ ರಾಜೇಶ್ ಕಡೆಯವರು ದೂರಿದ್ದಾರೆ.
ಘಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರೇವಣ್ಣ, ಪುತ್ರನ ಕಾರು ಅಪಘಾತಕ್ಕೀಡಾಗಿ ಯುವಕ ಮೃತಪಟ್ಟಿರುವುದು ನಿಜ. ಆದರೆ, ಶಶಾಂಕ್ ಬದಲು ಚಾಲಕ ಕಾರು ಚಲಾಯಿಸುತ್ತಿದ್ದ ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಯಾರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
‘ಚಾಲಕ ಕಾರು ಓಡಿಸುತ್ತಿದ್ದ’
‘ನಾನು ಕಾರು ಚಲಾಯಿಸುತ್ತಿರಲಿಲ್ಲ. ನಮ್ಮ ಚಾಲಕ ನಾಗಪ್ಪ ಕಾರು ಓಡಿಸುತ್ತಿದ್ದ' ಎಂದು ಶಶಾಂಕ್ ರೇವಣ್ಣ ಹೇಳಿದ್ದಾರೆ.
‘ಮಾಗಡಿ ತೋಟದ ಮನೆಯಲ್ಲಿ ಪೂಜೆ ಮುಗಿಸಿ ಮಗಳೊಂದಿಗೆ ಐವರು ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆವು. ಸಿಡಿಗನಹಳ್ಳಿ ಸಮೀಪ ಎದುರಿನಿಂದ ಎರಡು ಬೈಕ್ಗಳು ಅತಿ ವೇಗವಾಗಿ ಬಂದು ನಮ್ಮ ಕಾರಿಗೆ ಗುದ್ದಿದವು. ಕಾರಿನಲ್ಲಿದ್ದ ಮಗಳು ಭಯಪಡುತ್ತಾಳೆ ಎಂದು ಅಪಘಾತ ನಡೆದ ಸ್ಥಳದಿಂದ ಸ್ವಲ್ಪ ಮುಂದೆ ಹೋದೆವು. ನನ್ನ ತಂದೆಗೆ ಮಾಹಿತಿ ನೀಡಿ ಕಾರನ್ನು ಠಾಣೆಗೆ ಕಳಿಸಿ, ಬೇರೆ ಕಾರಿನಲ್ಲಿ ನಾವು ಬೆಂಗಳೂರು ತಲುಪಿದೆವು’ ಎಂದು ಅವರು ಹೇಳಿದರು.
ಮಾಗಡಿಯ ತಮ್ಮ ತೋಟದ ಮನೆಯಲ್ಲಿ ಗುರುವಾರ ಪೂಜಾ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹೊರಟಿದ್ದ ಎಚ್.ಎಂ.ರೇವಣ್ಣ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ‘ಎರಡು ಬೈಕ್ ನನ್ನ ಮಗನ ಕಾರಿಗೆ ಬಂದು ಗುದ್ದಿವೆ. ಬೈಕ್ ಸವಾರ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಅದಕ್ಕಾಗಿ ವಿಷಾದಿಸುತ್ತೇನೆ. ಮೃತನ ಮನೆಗೆ ತೆರಳಿ ಸಾಂತ್ವನ ಹೇಳುತ್ತೇನೆ. ಕಾನೂನಿನ ಪ್ರಕಾರ ಕುಟುಂಬಕ್ಕೆ ಏನು ಪರಿಹಾರ ತಲುಪಬೇಕು ತಲುಪಲಿ. ನಾನು ಅವರ ಕುಟುಂಬದ ಜತೆ ನಿಲ್ಲುವ ಕೆಲಸ ಮಾಡುತ್ತೇನೆ’ ಎಂದು ಅವರು ತಿಳಿಸಿದರು.
ಎಫ್ಐಆರ್ನಲ್ಲಿ ವಾಹನ ಸಂಖ್ಯೆ; ಚಾಲಕನ ಹೆಸರಿಲ್ಲ
ಮೃತ ಯುವಕನ ಸಂಬಂಧಿ ಮಾಗಡಿ ತಿರುಮಲೆಯ ರಾಜೇಶ್ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುರುವಾರ ರಾತ್ರಿ ಮಾಗಡಿ ಗುಡೇಮಾರನಹಳ್ಳಿ ಮುಖ್ಯ ರಸ್ತೆಯಲ್ಲಿ ಕೆಎ 51 ಎಂ.ಕ್ಯೂ. 0555 ಕಾರು ಮುಂದೆ ಹೋಗುತ್ತಿದ್ದ ಬೈಕ್ ಓವರ್ ಟೆಕ್ ಮಾಡಲು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ಬೈಕ್ ಸವಾರ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನ ಚಾಲಕನನ್ನು ಪತ್ತೆಹಚ್ಚಿ ಕಾನೂನಿನ ರೀತಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಮೇರೆಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಆರೋಪಿಗಳ ಹೆಸರು ಮತ್ತು ವಿಳಾಸದ ಕಾಲಂನಲ್ಲಿ ವಾಹನದ ಸಂಖ್ಯೆ ನಮೂದಿಸಲಾಗಿದೆ. ‘ಕಾರು ಚಾಲಕ’ ಎಂದಷ್ಟೇ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದು,ಹೆಸರು ನಮೂದಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.