ಚನ್ನಪಟ್ಟಣ: ರಾಷ್ಟ್ರೀಯ ಹೆದ್ದಾರಿ 275 ಪಟ್ಲು ವಂದಾರಗುಪ್ಪೆ ಬಳಿ ಸಂಪರ್ಕ ರಸ್ತೆ ಮುಚ್ಚದೆ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿ ದೇವರಹೊಸಹಳ್ಳಿ, ರಾಂಪುರ, ಕೋಮನಹಳ್ಳಿ, ಪಟ್ಲು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಮರದ ಕೊಂಬೆಗಳಿಗೆ ಬೆಂಕಿ ಇಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿ ಭರದಿಂದ ಸಾಗುತ್ತಿರುವುದು ಸ್ವಾಗತಾರ್ಹ. ಆದರೆ, ಇಲ್ಲಿರುವ ಪಟ್ಲು ವಂದಾರಗುಪ್ಪೆ ಸಂಪರ್ಕ ರಸ್ತೆ ಮುಚ್ಚಲಾಗುತ್ತಿದೆ. ಈ ರಸ್ತೆ ಗ್ರಾಮೀಣ ಭಾಗದ ದೇವರಹೊಸಹಳ್ಳಿ, ಕೋಮನಹಳ್ಳಿ, ಚಿಕ್ಕೇನಹಳ್ಳಿ, ನಾಗವಾರ, ಬೇವೂರು, ಉಜ್ಜಿನಿ, ಮಾಕಳಿ, ಹುಲಿಯೂರು ದುರ್ಗ, ಕುಣಿಗಲ್ ಸೇರಿದಂತೆ ಸುಮಾರು 50-60 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅದರಲ್ಲೂ ವಿಶೇಷವಾಗಿ ರೈತರು, ಉದ್ಯೋಗಿಗಳು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇದನ್ನು ಮುಚ್ಚಲು ಉದ್ದೇಶಿಸಿರುವುದು ತರವಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ರಸ್ತೆ ಮುಚ್ಚಿದರೆ ವಿನಾಕಾರಣ ಈ ಭಾಗದ ಜನರು 12ರಿಂದ 15ಕಿ.ಮೀ. ಬಳಸಿಕೊಂಡು ಚನ್ನಪಟ್ಟಣ ರಾಮನಗರ ತಲುಪಬೇಕಾಗಿದೆ. ಇದರಿಂದ ಅನಾನುಕೂಲವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗ್ರಾಮೀಣ ಜನರ ಹಿತದೃಷ್ಟಿಯಿಂದ ಈ ರಸ್ತೆ ಮುಚ್ಚಬಾರದು ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.
ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಮುಖಂಡರಾದ ಜಯರಾಜು, ದೇವರಾಜು, ಪ್ರತಾಪ್, ಶಿವಲಿಂಗಯ್ಯ, ರಾಮಸಂಜೀವಯ್ಯ, ಎಲ್.ಚಿಕ್ಕಯ್ಯ, ರಾಮಸಂಜೀವಯ್ಯ, ಸಿದ್ದಲಿಂಗಯ್ಯ, ರಾಜೇಂದ್ರ, ಧನಂಜಯ, ನಾರಾಯಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.