ಸೇತುವೆ ಬಿರುಕು ಬಿಟ್ಟಿರುವ ದೃಶ್ಯ
ಮಾಗಡಿ: ತಾಲ್ಲೂಕಿನ ಮಂಚನಬೆಲೆ ಜಲಾಶಯದ ಸಮೀಪ ಎರಡು ವರ್ಷಗಳ ಹಿಂದೆ ಭಾರೀ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆ ಪರ್ಯಾಯವಾಗಿ ನಿರ್ಮಿಸಿದ್ದ ಎರಡನೇ ತಾತ್ಕಾಲಿಕ ಸೇತುವೆ ಮಂಗಳವಾರ ಬಿರುಕು ಬಿಟ್ಟಿದೆ.
ತಿಂಗಳ ಹಿಂದೆಯಷ್ಟೇ ಸುರಿದ ಮಳೆಯಿಂದಾಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿತ್ತು. ಆಗ ಮೊದಲಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿ, ಒಂದು ಭಾಗದ ಸಂಪರ್ಕವೇ ಕಡಿತಗೊಂಡಿತ್ತು. ಬಳಿಕ, ಮತ್ತೊಂದು ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ‘ಫೆಂಜಲ್’ ಚಂಡಮಾರುತದ ಪರಿಣಾಮದಿಂದಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಈಗಿನ ಸೇತುವೆಯೂ ಬಿರುಕು ಬಿಟ್ಟಿದ್ದು, ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಹಿಂದೆ ಕೊಚ್ಚಿ ಹೋಗಿದ್ದ ಸೇತುವೆಯ ಮರು ನಿರ್ಮಾಣ ಕಾರ್ಯ ಎರಡು ವರ್ಷಗಳಾದರೂ ಆರಂಭಗೊಂಡಿಲ್ಲ. ಅಧಿಕಾರಿಗಳು ಒಂದಿಲ್ಲೊಂದು ನೆಪ ಹೇಳುತ್ತಲೇ ಬರುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರು ಹಾಗೂ ಜಲಾಶಯಕ್ಕೆ ಬರುವ ಪ್ರವಾಸಿಗರು ಆತಂಕದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಿರುವ ಸೇತುವೆ ದಾಟಿಕೊಂಡು ಹೋಗಬೇಕಿದೆ. ದ್ವಿಚಕ್ರ ವಾಹನ, ಬಸ್ಸುಗಳು ಸೇರಿದಂತೆ ಹಲವು ಬಗೆಯ ವಾಹನಗಳು ಇಲ್ಲಿ ಓಡಾಡುತ್ತವೆ.
ಸೇತುವೆ ಬಿರುಕು ಬಿಟ್ಟಿರುವ ದೃಶ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.