ಮಾಗಡಿ: ರೇಷ್ಮೆ ಇಲಾಖೆಯ ಬಿತ್ತನೆ ಕೋಠಿ ಉದ್ಘಾಟನೆಯಾದ 25 ವರ್ಷಗಳಲ್ಲಿ ಶಿಥಿಲಗೊಂಡಿದೆ ಎಂದು ರೈತ ಮುಖಂಡ ಮಂಜುನಾಥ ಬೇಸರ ವ್ಯಕ್ತಪಡಿಸಿದರು.
ಸಾತನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೋಣಕುಪ್ಪೆ ಬಳಿ 1993ರಲ್ಲಿ ಅಂದಿನ ರೇಷ್ಮೆ ಸಚಿವರಾಗಿ ಡಾ.ಜಿ.ಪರಮೇಶ್ವರ ಮತ್ತು ಶಾಸಕ ಎಚ್.ಎಂ. ರೇವಣ್ಣ ಕಟ್ಟಡ ಕಟ್ಟಲು ಶಂಕುಸ್ಥಾಪನೆ ನೆರವೇರಿಸಿದ್ದರು. 1995ರ ಫೆಬ್ರವರಿ 9 ರಂದು ಸಚಿವ ಡಿ.ನಾಗರಾಜಯ್ಯ ಮತ್ತು ಅಂದಿನ ಶಾಸಕ ಎಚ್.ಸಿ.ಬಾಲಕೃಷ್ಣ ಬಿತ್ತನೆ ಕೋಠಿ ಕಟ್ಟಡ ಉದ್ಘಾಟಿಸಿದ್ದರು. ಇದೀಗ ಕಟ್ಟಡಗಳು ಪಾಳು ಬಿದ್ದಿದ್ದು, ಭೂತ ಬಂಗಲೆಗಳಂತೆ ಕಾಣುತ್ತಿವೆ ಎಂದು ಹೇಳಿದರು.
ವಿಶ್ವಬ್ಯಾಂಕ್ ಹಣಕಾಸು ನೆರವಿನ ಯೋಜನೆಯಡಿ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. 2004ರವರೆಗೆ ಈ ಕಟ್ಟಡದಲ್ಲಿ ಮೊಟ್ಟೆ ಉತ್ಪಾದನೆ ಕಾರ್ಯ ನಡೆದಿತ್ತು. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ರಾಜ್ಯದ ವಿವಿಧ ಭಾಗದ ರೈತರಿಗೆ ಬಿತ್ತನೆ ಗೂಡು ಸರಬರಾಜು ಮಾಡಲಾಗುತ್ತಿತ್ತು. ಕ್ರಮೇಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಅಲ್ಲಿಯೇ ರೇಷ್ಮೆ ಬಿತ್ತನೆ ಗೂಡು ಉತ್ಪಾದನೆ ಮಾಡಿಕೊಳ್ಳಲಾರಂಭಿಸಿದ್ದರಿಂದ ಇಲ್ಲಿನ ಬಿತ್ತನೆ ಗೂಡಿಗೆ ಬೇಡಿಕೆ ಕಡಿಮೆಯಾಯಿತು. ಇದೀಗ ರೇಷ್ಮೆ ಬೆಳೆಯುವ ರೈತರ ಸಂಖ್ಯೆಯು ಕಡಿಮೆಯಾಗಿದೆ. ಈಗ ಎಲ್ಲೆಡೆ ಬೈವೋಲ್ಟೆನ್ ಗೂಡು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.
ಕಟ್ಟಡವನ್ನುಸರ್ಕಾರಿ ಪದವಿ ಪೂರ್ವ ಕಾಲೇಜಿನ ತರಗತಿಗಳನ್ನು ನಡೆಸಲು ಬಾಡಿಗೆ ನೀಡಿದ್ದರು. ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಿದ ನಂತರ ದೋಣಕುಪ್ಪೆ ಬಿತ್ತನೆ ಕೋಠಿ ಮತ್ತು ರೇಷ್ಮೆ ಇಲಾಖೆ ನೌಕರರ ವಸತಿ ಗೃಹಗಳನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕಟ್ಟಡದಲ್ಲಿದ್ದ ಮರದ ಕಿಟಕಿ, ಬಾಗಿಲುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಮಾಗಡಿಯ ಬಿತ್ತನೆ ಕೋಠಿಯಲ್ಲಿ ಇಡೀ ರಾಜ್ಯಕ್ಕೆ ಬಿತ್ತನೆ ಮೊಟ್ಟೆ ತಯಾರಿಸಿ ಕೊಡಲಾಗುತ್ತಿತ್ತು. ಇಲ್ಲಿನ ಬಿತ್ತನೆ ಗೂಡಿಗೆ ಬಹು ಬೇಡಿಕೆಯಿತ್ತು. ಇದೀಗ ರೈತರು ರೇಷ್ಮೆ ಬೆಳೆಯುವುದನ್ನು ಕಡಿಮೆ ಮಾಡಿ ಮಾವು ಬೆಳೆಯಲು ಮುಂದಾಗಿದ್ದಾರೆ. ರೇಷ್ಮೆ ಕೃಷಿ ಕಡಿಮೆಯಾಗಿದೆ. ಮತ್ತಿಕೆರೆಯಲ್ಲಿ ಇರುವ ರೇಷ್ಮೆ ಬಿತ್ತನೆ ಕೋಠಿ ಮಾತ್ರಸಕ್ರಿಯವಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಕಟ್ಟಡಗಳನ್ನು ದುರಸ್ತಿ ಪಡಿಸಿ ಬಳಸಿಕೊಳ್ಳುವುದು ಇಲಾಖೆಗಳ ಆದ್ಯ ಕರ್ತವ್ಯ ಎಂದ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.