ಮಾಗಡಿ:ಪಟ್ಟಣದಲ್ಲಿ ಮಂಗಳವಾರದಿಂದಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ದಿನಸಿ ಅಂಗಡಿ ಮತ್ತು ತರಕಾರಿ ಖರೀದಿಗಾಗಿ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದರು.
ರಾಮರಾಜ ಅರಸ್ ರಸ್ತೆ, ಸರ್ಕಾರಿ ಬಸ್ ನಿಲ್ದಾಣದ ರಸ್ತೆ, ಕೆಂಪೇಗೌಡ ಸರ್ಕಲ್, ರಾಮಮಂದಿರ ರಸ್ತೆಗಳಲ್ಲಿ ವಾಹನಗಳ ಜಮಾವಣೆಗೊಂಡಿದ್ದವು. ಪೊಲೀಸರು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದರು. 1 ಕೆ.ಜಿ.ಈರುಳ್ಳಿ ₹100, ಟೊಮೆಟೊ ₹60, ಆಲೂಗಡ್ಡೆ ₹50,ಸೇಬು ಕೆ.ಜಿ.ಯೊಂದಕ್ಕೆ ₹200, ಬಾಳೆಹಣ್ಣು ₹60ರಂತೆ ಮಾರಾಟವಾಯಿತು. ಸೊಪ್ಪು, ತರಕಾರಿ ಬೆಲೆ ಗಗನಕ್ಕೇರಿದ್ದರೂ ಖರೀದಿಸಿದರು. ದಿನಸಿ ಅಂಗಡಿಗಳ ಮುಂದೆ ಜನರ ಗುಂಪು ನೂಕುನುಗ್ಗಲಿನಿಂದ ಕೂಡಿತ್ತು. ಅಫೆ, ಮತ್ತು ಆಟೊ ರಿಕ್ಷಾಗಳು ಮಾಮೂಲಿನಂತೆ ಜನರನ್ನು ತುಂಬಿಕೊಂಡು ಸಂಚರಿಸಿದವು. ಸರ್ಕಾರಿ ಬಸ್ ಸಂಚಾರ ವಿರಳವಾಗಿತ್ತು. ಕೃಷಿ, ತೋಟಗಾರಿಕೆ, ಕಂದಾಯ, ಪಶುಪಾಲನೆ, ಉಪನೋಂದಣಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ನೌಕರರ ಹಾಜರಾತಿ ಕಡಿಮೆ ಇತ್ತು.
ಮಧ್ಯಾಹ್ನ 3ಗಂಟೆ ನಂತರ ವಹಿವಾಟು ನಿಲ್ಲಿಸಿ ಲಾಕ್ ಡೌನ್ಗೆ ಜನರು ಸಹಕರಿಸಿದರು. ಖಾಸಗಿ ಆಸ್ಪತ್ರೆಗಳ ವೈದ್ಯರು ಎಂದಿನಂತೆ ಕರ್ತವ್ಯ ನಿರ್ವಹಿಸಿದರು. ವೈನ್ ಸ್ಟೋರ್ಗಳ ಮುಂದೆ ಮದ್ಯವ್ಯಸನಿಗಳು ಸಾಲಾಗಿ ನಿಂತು ಮದ್ಯ ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಪಟ್ಟಣದಲ್ಲಿ ಕೋವಿಡ್ ಸೋಂಕಿನಿಂದ 7 ಜನ ಮೃತಪಟ್ಟಿದ್ದಾರೆ. 138 ಜನ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 185 ಜನರು ಕ್ವಾರಂಟೈನ್ ಕೇಂದ್ರಗಳಲ್ಲಿದ್ದಾರೆ. ಇನ್ನೂ 200 ಜನರ ಗಂಟಲು ದ್ರವ ಪರೀಕ್ಷೆ ಫಲಿತಾಂಶ ಬರಬೇಕಿದೆ. ಲಾಕ್ ಡೌನ್ ಉಲ್ಲಂಘಿಸಿದವರಿಗೆ ಮಂಗಳವಾರದಿಂದ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎನ್.ಮಹೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.