ಮಲೇಷ್ಯಾದ ಪ್ಯಾನಸೋನಿಕ್ ರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ನಡೆದ ನಡೆದ ಅಂತರರಾಷ್ಟ್ರೀಯ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ರಾಮನಗರದ ಶಾನ್ವಿ ಸತೀಶ್ ಸ್ಪಾರಿಂಗ್ ವಿಭಾಗದಲ್ಲಿ ಚಿನ್ನ, ಪ್ಯಾಟರ್ನ್ನಲ್ಲಿ ಬೆಳ್ಳಿ ಹಾಗೂ ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ.
ರಾಮನಗರ: ಮಲೇಷ್ಯಾದ ಪ್ಯಾನಸೋನಿಕ್ ರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ಮೇ 1ರಿಂದ 4ರವರೆಗೆ ನಡೆದ ಅಂತರರಾಷ್ಟ್ರೀಯ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ರಾಮನಗರ ಜಿಲ್ಲೆಯ ಶಾನ್ವಿ ಸತೀಶ್, ಮೂರು ವಿಭಾಗಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
7ರಿಂದ 8 ವರ್ಷದೊಳಗಿನ 23 ಕೆ.ಜಿ.ಯಿಂದ 27 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ವಾನಿ ಸ್ಪಾರಿಂಗ್ ಸ್ಪರ್ಧೆಯಲ್ಲಿ 1 ಚಿನ್ನ , ಪ್ಯಾಟರ್ನ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ 1 ಕಂಚು ಪದಕವನ್ನು ಕೊರಳಿಗೇರಿಸಿಕೊಂಡಿದ್ದಾಳೆ. ಸ್ಪಾರಿಂಗ್ ವಿಭಾಗದಲ್ಲಿ ಆರಂಭದಿಂದಲೂ ಮುನ್ನಡೆ ಸಾಧಿಸಿದ ಶಾನ್ವಿ, ಅಂತಿಮ ಪಂದ್ಯದಲ್ಲಿ ಮಲೇಷ್ಯಾ ಸ್ಪರ್ಧಿಯನ್ನು ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದಳು.
ನಾಲ್ಕು ದಿನ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮ್ಯಾನ್ಮಾರ್, ಸಿರಿಯಾ ಹಾಗೂ ಮಲೇಷ್ಯಾ ರಾಷ್ಟ್ರಗಳ 1500ಕ್ಕೂ ಹೆಚ್ಚು ಟೇಕ್ವಾಂಡೊ ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ್ದ 65 ಮಂದಿಯ ತಂಡದಲ್ಲಿ ಶಾನ್ವಿ ಕೂಡ ಒಬ್ಬಳು.
ಶಾನ್ವಿ ಇದಕ್ಕೂ ಮುಂಚೆ ದುಬೈ ಮತ್ತು ಉಜ್ಬೇಕಿಸ್ತಾನದಲ್ಲಿ ನಡೆದ ಟೇಕ್ವಾಂಡೊ ಸ್ಪರ್ಧೆಗಳಲ್ಲಿ ಮತ್ತು ಏಷಿಯನ್ ಚಾಂಪಿಯನ್ಶಿಪ್ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದ ಶಾನ್ವಿ, ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದಳು. ಶಾನ್ವಿಗೆ ಭಾರತ ತಂಡದ ಪ್ರದೀಪ್ ಮತ್ತು ಬಾಲರಾಜನ್ ತರಬೇತುದಾರರಾಗಿದ್ದಾರೆ.
ನಗರದ ನೇಟಸ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ 7 ವರ್ಷದ ಶಾನ್ವಿ, ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಮತ್ತು ಚೈತ್ರಾ ದಂಪತಿ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.