ಕನಕಪುರ: ‘ಪ್ರತಿ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆಯುತ್ತಿತ್ತು. ಈ ಸಲ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಒಮ್ಮತ ಅಭ್ಯರ್ಥಿಯಾಗಿ ನಾನು ಕಣದಲ್ಲಿ ಇದ್ದೇನೆ. ಉಭಯ ಪಕ್ಷಗಳು ವೈಮನಸ್ಸು ಮರೆತು ಮತ ನೀಡಬೇಕೆಂದು’ ಡಿ.ಕೆ.ಸುರೇಶ್ ಮನವಿ ಮಾಡಿದರು.
ನಗರದ ರೈಸ್ ಮಿಲ್ ಬಳಿ ಗುರುವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಅನೇಕ ಸಂದರ್ಭದಲ್ಲಿ ಎರಡೂ ಪಕ್ಷದವರು ಪರಸ್ಪರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದ ಕಾರಣ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅನಿವಾರ್ಯವಾಗಿ ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ’ ಎಂದರು.
ದೇಶದಲ್ಲಿ ಸುಳ್ಳು ಪ್ರಚಾರದೊಂದಿಗೆ ಯುವ ಜನರನ್ನು ದಿಕ್ಕು ತಪ್ಪಿಸುತ್ತಿರುವ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಮಾತ್ರ ದೇಶವನ್ನು ಸೈನಿಕರು ರಕ್ಷಣೆ ಮಾಡುತ್ತಿಲ್ಲ. ನೆಹರೂ, ಲಾಲ್ಬಹದ್ದೂರ್ ಶಾಸ್ತ್ರಿ, ವಾಜಪೇಯಿ, ದೇವೇಗೌಡ ಅವರು ಪ್ರಧಾನಿ ಅದಾಗಲೂ ಸೈನಿಕರು ತಮ್ಮ ಕೆಲಸ ಮಾಡಿದ್ದಾರೆ. ಇಂತಹ ಸತ್ಯವನ್ನು ಮರೆಮಾಚಿ ಮೋದಿ ಅವರೊಬ್ಬರೇ ದೇಶವನ್ನು ರಕ್ಷಣೆ ಮಾಡಿರುವ ರೀತಿಯಲ್ಲಿ ಯುವ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಕುಟುಕಿದರು.
ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ನೀಡಿರುವ ಯಾವ ಭರವಸೆಯೂ ಈಡೇರಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿಯಾಗಿದ್ದು ಅದಕ್ಕೆ ಯಾರು ಕಿವಿಕೊಡಬೇಡಬಾರದು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ನಾರಾಯಣಗೌಡ, ಡಿ.ಎಂ.ವಿಶ್ವನಾಥ್ ಮಾತನಾಡಿ ರಾಜ್ಯದಲ್ಲಿ ಪಕ್ಷದ ವರಿಷ್ಠರು ಕಾಂಗ್ರೆಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ. ಹಳೆ ಕಹಿ ನೆನಪುಗಳನ್ನು ಮೆರತು ಒಟ್ಟಾಗಿ ಗೆಲುವಿಗೆ ದುಡಿಯಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ಬಿ.ಆರ್.ಗಣೇಶ್, ಸಿದ್ದಮರೀಗೌಡ, ಪುಟ್ಟಸ್ವಾಮಿ, ಜೋಸೆಫ್, ಪುರುಷೋತ್ತಮ್, ರಾಯಸಂದ್ರರವಿ, ತುಂಗಣಿರವಿ, ಆರ್.ಎಂ.ನಾಗೇಶ್, ರಂಗಸ್ವಾಮಿ, ಧನಂಜಯ, ಕಬ್ಬಾಳೇಗೌಡ, ಬಿ.ಎಸ್.ಗೌಡ, ಪುಟ್ಟರಾಜು, ಸ್ಟುಡಿಯೊ ಚಂದ್ರ, ಚಿನ್ನಸ್ವಾಮಿ, ಕುಮಾರ್, ರಾಜಗೋಪಾಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.