ಬಿಡದಿ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಕಾನೂನು ಬಾಹಿರವಾಗಿ ಬೀಗ ಮುದ್ರೆಯನ್ನು ಘೋಷಿಸಿ 66 ಕಾರ್ಮಿಕರ ಅಮಾನತು ಮತ್ತು 8 ಕಾರ್ಮಿಕರನ್ನು ವಜಾ ಮಾಡಿದೆ. ಅಮಾನತಾದವರ ವಿಚಾರಣೆ ಕನ್ನಡದಲ್ಲಿ ನಡೆಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
‘ಈಗ 66 ಕಾರ್ಮಿಕರ ಆಂತರಿಕ ವಿಚಾರಣೆ ಪ್ರಾರಂಭವಾಗಿದೆ. ವಿಚಾರಣೆಯಲ್ಲಿ ದಾಖಲೆಗಳನ್ನು ಕನ್ನಡದಲ್ಲಿ ನೀಡಬೇಕು ಹಾಗೂ ವಿಚಾರಣಾ ಪ್ರಕ್ರಿಯೆಯನ್ನು ಕನ್ನಡದಲ್ಲಿ ದಾಖಲಿಸಬೇಕೆಂದು ಕೇಳಿದರೆ, ಕನ್ನಡದಲ್ಲಿ ವಿಚಾರಣೆ ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಮತ್ತು ವಿಚಾರಣಾಧಿಕಾರಿಗಳು ತಿಳಿಸಿದ್ದಾರೆ. ಇಂಗ್ಲಿಷ್ನಲ್ಲಿ ವಿಚಾರಣೆ ನಡೆದರೆ ಸಾಮಾನ್ಯ ಕಾರ್ಮಿಕರಿಗೆ
ಕಾನೂನಾತ್ಮಕ ಪದಗಳು ಅರ್ಥವಾಗುವುದಿಲ್ಲ ಎಂದು ಎಷ್ಟೇ ಕೇಳಿಕೊಂಡರು ಕನ್ನಡದಲ್ಲಿ ನಡಾವಳಿ ನೀಡಲು ನಿರಾಕರಿಸುತ್ತಿದ್ದಾರೆ’ ಎಂದು ಕಾರ್ಮಿಕರು ದೂರಿದ್ದಾರೆ.
ಸಂಸ್ಥೆಯ ಈ ಧೋರಣೆಯನ್ನು ಖಂಡಿಸಿ ಅಮಾನತ್ತಾದ ಕಾರ್ಮಿಕರು ಬಿಡದಿ ಕೈಗಾರಿಕಾ ಪ್ರದೇಶದ ಅಸೋಸಿಯೇಷನ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ವಿಚಾರಣೆಯನ್ನು ಕನ್ನಡದಲ್ಲಿ ನಡೆಸಬೇಕೆಂದು ಮತ್ತು ನಡಾವಳಿಯನ್ನು ಸರಳ
ಕನ್ನಡದಲ್ಲಿ ನೀಡಬೇಕೆಂದು ಒತ್ತಾಯಿಸಿದರು.
‘ಇದಕ್ಕೆ ತಪ್ಪಿದ್ದಲ್ಲಿ ಟಿಕೆಎಂ ಸಂಸ್ಥೆಯ ಕನ್ನಡ ವಿರೋಧಿ ನೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಗಿದೆ’ ಎಂದು ಕಾರ್ಮಿಕ ಸಂಘಟನೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.