ADVERTISEMENT

ಅಣ್ಣಾಮಲೈ ಸೇರಿ ಎಲ್ಲರಿಗೂ ಸೋಲು: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:41 IST
Last Updated 26 ಏಪ್ರಿಲ್ 2024, 15:41 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುವ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ರಾಜ್ಯದ ಸಂಬಳ ಪಡೆದು ತಮಿಳುನಾಡಿಗೆ ಓಡಿ ಹೋಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರುನಾಡಿನ ಜನರ ಮೇಲೆ ಒಲವು ಇದ್ದರೆ ಯಾವುದಾದರೂ ಲೋಕಸಭೆ ಕ್ಷೇತ್ರದಿಂದ ಇಲ್ಲಿಯೇ ಸ್ಪರ್ಧೆ ಮಾಡಬಹುದಿತ್ತು. ಈ ಬಾರಿ ಅಣ್ಣಾಮಲೈ ಸೇರಿದಂತೆ ಯಾರು ಗೆಲ್ಲುವುದಿಲ್ಲ. ಶೂನ್ಯ ಸಾಧನೆಯಾಗುತ್ತದೆ‘ ಎಂದರು. 

ಕೇಂದ್ರದ ವಿರುದ್ದ ವಾಗ್ದಾಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಜನ ಸೈನಿಕರು ಹತರಾಗಿದ್ದಾರೆ, ಎಷ್ಟು ಜನ ಭ್ರಷ್ಟ ರಾಜಕಾರಣಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಪ್ರಕರಣಗಳನ್ನು ಕೈ ಬಿಡಲಾಗಿದೆ ಎಂದು ಪ್ರಶ್ನಿಸಿದರು.

ADVERTISEMENT

‘ಪೆಟ್ರೋಲ್‌, ಡಿಸೇಲ್‌ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವೇನು? ದೇಶದ ಗಡಿಯನ್ನು ಚೀನಾ ಎಷ್ಟು ಆಕ್ರಮಿಸಿಕೊಂಡಿದೆ ಎಂಬುದನ್ನು ಜನರ ಮುಂದಿಡಲಿ. ಈ ಎಲ್ಲಾ ವೈಫಲ್ಯ ಮುಚ್ಚಿಡಲು ಮೋದಿ ಅವರು ಮಂಗಳಸೂತ್ರ ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಆಡಳಿತ ಹಿಡಿದರೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುತ್ತದೆ ಎನ್ನುತ್ತಾರೆ. ಮತದಾರರಿಗೆ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಷ್ಟೊಂದು ಕೆಳಮಟ್ಟದ ರಾಜಕೀಯ ಅವರಿಂದ ನಿರೀಕ್ಷೆ ಮಾಡಿರಲಿಲ್ಲ’ ಎಂದು ಹೇಳಿದರು.

‘ಮತದಾರರು ಈ ಬಾರಿ ಮೋದಿ ನೋಡಿ ಮತ ಹಾಕುವುದಿಲ್ಲ. ದೇಶದಲ್ಲಿ ಬಿಜೆಪಿಗೆ ಸೋಲು ಪಕ್ಕಾ. ಮುಂದಿನ ದಿನಗಳಲ್ಲಿ ಅವರೇನಿದ್ದರೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧೆ ಮಾಡುವುದು ಸೂಕ್ತ. ಮಾತೆತ್ತಿದರೆ ಅವರಿಗೆ ಆ ಎರಡು ದೇಶಗಳೇ ನೆನಪಾಗುತ್ತವೆ’ ಎಂದು ಸಚಿವರು ಲೇವಡಿ ಮಾಡಿದರು.

‘ಗ್ಯಾರಂಟಿ ಯೋಜನೆಗಳು ಶೇ 10ರಷ್ಟು ಜನರಿಗೆ ಮಾತ್ರ ಮುಟ್ಟಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹೇಳಿರುವುದು ಹಾಸ್ಯಾಸ್ಪದ. ಅವರ ಮನೆಯಲ್ಲಿ ಕೆಲಸ ಮಾಡುವವರೂ ಕೂಡ ಗ್ಯಾರಂಟಿ ಫಲಾನುಭವಿಗಳೇ ಆಗಿದ್ದಾರೆ. ಸುಳ್ಳು ಹೇಳುವುದೇ ಬಿಜೆಪಿಯ ಕಾಯಕ’ ಎಂದು ಲೇವಡಿ ಮಾಡಿದರು. 

ಜಿ.ಡಿ.‌ಮಂಜುನಾಥ, ಚಂದ್ರಭೂಪಾಲ್, ಶೇಷಾದ್ರಿ, ಶಮಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.