ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ (67) ಅವರು ಕೋವಿಡ್ನಿಂದಾಗಿ ಬುಧವಾರ ರಾತ್ರಿ ನಿಧನರಾದರು.
ಮೂರು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ಇರುವುದು ಖಚಿತವಾದ ನಂತರ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಎದುರು ಜನ ಸಾಗರವೇ ನೆರೆದಿದೆ.ಸೂಕ್ತ ಸಮಯದಲ್ಲಿ ಬೆಡ್ ಸಿಗಲಿಲ್ಲ ಎಂದು ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಐಎಸ್ಎಲ್ ನೌಕರರಾಗಿ ಜೀವನ ಆರಂಭಿಸಿದ್ದ ಅವರು ಕಾರ್ಮಿಕ ನಾಯಕರಾಗಿ ಬೆಳೆದು ನಂತರ ರಾಜಕೀಯ ಕ್ಷೇತ್ರದಲ್ಲಿ ಬೆಳೆದಿದ್ದರು.
1994ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಪಡೆದಿದ್ದ ಅಪ್ಪಾಜಿ, 1999ರಲ್ಲೂ ಕಾಂಗ್ರೆಸ್ನ ಸಂಗಮೇಶ್ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸಿ ವಿಜಯ ದಾಖಲಿಸಿದ್ದರು. ನಂತರ ಬದಲಾದ ಕಾಲಘಟ್ಟದಲ್ಲಿ ಬಿ.ಕೆ. ಸಂಗಮೇಶ್ ಎದುರು ಎರಡು ಬಾರಿ ಸೋಲುಕಂಡ ನಂತರ ಜೆಡಿಎಸ್ ಮೊರೆ ಹೋಗಿದ್ದರು. 2013ರಲ್ಲಿ ಜೆಡಿಎಸ್ನಿಂದಲೇ ಸ್ಪರ್ಧಿಸಿ ಭಾರಿ ಅಂತರದ ಗೆಲುವು ಪಡೆದಿದ್ದರು.
2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಪ್ಪಾಜಿ ಅವರನ್ನು ಸೋಲಿಸಿದ್ದ ಸಂಗಮೇಶ್ವರ 2008ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. 2013ರಲ್ಲಿ ಸಂಗಮೇಶ್ವರ್ ಅವರಿಗೆ ಕೈಕೊಟ್ಟ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಿ.ಎಂ. ಇಬ್ರಾಹಿಂ ಅವರನ್ನು ಕಣಕ್ಕೆ ಇಳಿಸಿತ್ತು. ಬಂಡಾಯದ ಬಾವುಟ ಹಾರಿಸಿದ್ದ ಸಂಗಮೇಶ್ವರ ಹಾಗೂ ಇಬ್ರಾಹಿಂ ಅವರ ಕಿತ್ತಾಟದ ಲಾಭ ಪಡೆದ ಅಪ್ಪಾಜಿ ಭಾರಿ ಮತಗಳ ಅಂತರದಲ್ಲಿ ಗೆದ್ದಿದ್ದರು. ಟಿಕೆಟ್ ಹಂಚಿಕೆಯ ಯಡವಟ್ಟಿನಿಂದ ಕಾಂಗ್ರೆಸ್ ಗೆಲುವಿನ ಅವಕಾಶ ಕಳೆದುಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.