ಶಿವಮೊಗ್ಗ: ‘ಜಗತ್ತಿನಲ್ಲಿ ಮಾಯವಾಗುವ ಮಾಯೆಗಿಂತ ಉತ್ತಮ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ತಿಳಿಸಿದರು.
ನಗರದ ಎನ್ಇಎಸ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಕೌಶಲ್ಯ–2025’ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಜ್ಞಾನ ಸಂಪಾದನೆ ಜೊತೆಗೆ ಸಮಾಜಕ್ಕೆ ಸದ್ಬಳಕೆಯಾಗುವಂತಹ ಕೆಲಸ ಮಾಡಬೇಕು. ಅದಕ್ಕೆ ಕೌಶಲ ಅತ್ಯವಶ್ಯ. ವ್ಯಕ್ತಿತ್ವ ವಿಕಸನಕ್ಕೆ ಇಂತಹ ವೇದಿಕೆಗಳನ್ನು ಪೂರಕವಾಗಿ ಬಳಸಿಕೊಳ್ಳಿ. ಬುದ್ಧಿವಂತಿಕೆ ಜೊತೆಗೆ ಹೃದಯವಂತಿಕೆ ರೂಪಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
‘ಹಿರಿಯರು ಬದುಕಿದ ಸಮಾಜದ ನೆಲೆಗಟ್ಟುಗಳನ್ನು ಆಧುನಿಕತೆ ಎಂಬ ಭ್ರಮೆ ಮರೆಸುತ್ತಿದೆ. ಪುರಾತನ ಸಂಸ್ಕೃತಿ, ಸಂಸ್ಕಾರಗಳು ಹಿರಿಯರಿಂದ ಸಿಕ್ಕ ಬಳುವಳಿಯಾಗಿದ್ದು, ಅವುಗಳನ್ನು ಕಾಳಜಿಯಿಂದ ಪೋಷಿಸಿ. ಅಂತಃಶಕ್ತಿಯನ್ನು ಬೆಳೆಸಿಕೊಳ್ಳಿ. ಸಮರ್ಥವಾದ ಆತ್ಮಸ್ಥೈರ್ಯ ರೂಢಿಸಿಕೊಳ್ಳಿ. ಎತ್ತರದ ಸ್ಥಾನಕ್ಕೆ ಏರುವುದು ಸುಲಭವಾದರೂ, ಅದನ್ನು ಉಳಿಸಿಕೊಳ್ಳುವುದು ಒಂದು ಸವಾಲು’ ಎಂದು ಹೇಳಿದರು.
‘ಸವಾಲುಗಳಿಗೆ ಉತ್ತರ ನೀಡುವಲ್ಲಿ ನಮ್ಮ ಆತ್ಮಸ್ಥೈರ್ಯ ಸಹಕಾರಿ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕಬೇಕು. ಹಣಕ್ಕೆ ಹೆಚ್ಚು ಆದ್ಯತೆ ನೀಡಬೇಡಿ. ಕಷ್ಟಪಟ್ಟು ಸಂಪಾದಿಸಿದ್ದು ಸಂತೃಪ್ತಿಯನ್ನು ನೀಡುತ್ತದೆ. ಸಂಸ್ಕಾರದಿಂದ ಜಗತ್ತನ್ನು ಗೆಲ್ಲಬಹುದು. ಉತ್ತಮ ಸಂಸಾರ ಇದ್ದಲ್ಲಿ ಉತ್ತಮ ಸಂಸ್ಕಾರ ಪಡೆಯಬಹುದು. ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿ’ ಎಂದು ತಿಳಿಸಿದರು.
ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಠಿ ಮಾತನಾಡಿ, ‘ಚಿಕ್ಕ ಮಕ್ಕಳ ಊಟ– ತಿಂಡಿ ಎಂಬುದು ಮೊಬೈಲ್ ಮೇಲೆ ಅವಲಂಬಿತವಾಗಿದೆ. ದೈಹಿಕ ಆಟದಲ್ಲಿ ಪಾಲ್ಗೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಭಾರತದ ಸದೃಢ ಭವಿಷ್ಯ ಕಟ್ಟುವಲ್ಲಿ ಯುವ ಸಮೂಹದ ಪಾತ್ರ ಮಹತ್ವದ್ದಾಗಿದೆ. ದಿನಪತ್ರಿಕೆಗಳನ್ನು ಅಧ್ಯಯನ ಮಾಡಿ, ವಾಸ್ತವತೆಯನ್ನು ಅರಿಯಲು ಪ್ರಯತ್ನಿಸಿ’ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಚಂದ್ರಪ್ಪ ಎಸ್.ದುಂಡಪಲ್ಲಿ, ಎನ್ಇಎಸ್ ನಿರ್ದೇಶಕರಾದ ಎಚ್.ಸಿ. ಶಿವಕುಮಾರ್, ಆಜೀವ ಸದಸ್ಯರಾದ ಟಿ.ಎ.ರಾಮಪ್ರಸಾದ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ಪಂದನ್ ಹೊಳ್ಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.