ಶಿವಮೊಗ್ಗ:ಐಎಂಎ ಬಹುಕೋಟಿ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಪೀಸ್ ಆರ್ಗನೈಜೇಷನ್ ಸಂಘಟನೆ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಸ್ಥಾಪಕ ಮನ್ಸೂರ್ ಖಾನ್ ಅವರನ್ನು ಭಾರತಕ್ಕೆ ವಾಪಸ್ ಕರೆತರಬೇಕು. ವಿಚಾರಣೆಗೆ ಒಳಪಡಿಸಬೇಕು. ಮೋಸ ಹೋಗಿರುವ ಸಾವಿರಾರು ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಈ ಸಂಸ್ಥೆಯಲ್ಲಿ ಹಣ ಹೂಡಿ ಬದುಕು ಕಳೆದುಕೊಂಡಿರುವ ಮುಗ್ಧರಿಗೆ ಹಣ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು.
ಇದುವರೆಗೆ ವಂಚನೆಯ 30 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿವೆ. ಶಿವಮೊಗ್ಗದಲ್ಲೂ 181 ಪ್ರಕರಣಗಳು ಬೆಳಕಿಗೆ ಬಂದಿವೆ. ಹೂಡಿಕೆದಾರರ ನಂಬಿಸಿ ಹಣ ಲಪಟಾಯಿಸಿದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಅದಕ್ಕಾಗಿ ಇಡೀ ಪ್ರಕರಣ ಸಿಬಿಐಗೆ ವಹಿಸಬೇಕು. ಹಣ ಕಳೆದುಕೊಂಡವರಿಗೆ ಭದ್ರತೆ ನೀಡಬೇಕು. ಸಂಸ್ಥೆಯ, ಸಂಸ್ಥಾಪಕರ ಎಲ್ಲ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಸಲೀಂ, ಸಮೀವುಲ್ಲಾ, ಸಫೀವುಲ್ಲಾ, ನವೀದ್, ತನ್ವಿರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.