ರಿಪ್ಪನ್ಪೇಟೆ: ವಿದೇಶ ಮತ್ತು ಹೊರ ರಾಜ್ಯಗಳಿಂದ ಬಂದು ಪಟ್ಟಣದಲ್ಲಿ ನೆಲೆಸಿದ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹ ಮಾಡುತ್ತಿದ್ದ ಆಶಾ ಕಾರ್ಯಕರ್ತೆಗೆ ಬೆದರಿಕೆ ಒಡ್ಡಿದ ಪ್ರಕರಣ ಇಲ್ಲಿನ ನೆಹರೂ ಬಡಾವಣೆಯಲ್ಲಿ ವರದಿಯಾಗಿದೆ.
ಘಟನೆ ವಿವರ: ಸ್ಥಳೀಯರೊಬ್ಬರು ವಿದೇಶದಿಂದ ಈಚೆಗೆ ವಾಪಸ್ಸಾಗಿದ್ದರು. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ ಸ್ವಾತಿ ಅವರು ಅವರ ಕುಟುಂಬದ ಸದಸ್ಯರಿಗೆ ಕ್ವಾರಂಟೈನ್ ನಿಗಾ ಘಟಕದಲ್ಲಿ ಇರುವಂತೆ ಸೂಚಿಸಲಾಗಿದ್ದರೂ ಅವರು ಪಾಲನೆ ಮಾಡದಿರುವ ಬಗ್ಗೆ ಮಾಹಿತಿ ಪಡೆಯಲು ಅವರ ಮನೆಗೆ ತೆರಳಿದ್ದಾಗ ನೆಹರೂ ಬಡಾವಣೆಯ ನಿವಾಸಿಯಾದ ಗ್ರಾಮ ಪಂಚಾಯಿತಿ ಸದಸ್ಯ ಆಸೀಫ್ ಆಶಾ ಕಾರ್ಯಕರ್ತೆಗೆ ಬೆದರಿಕೆ ಒಡ್ಡಿದ್ದರು. ಆಶಾ ಕಾರ್ಯಕರ್ತೆ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಯತ್ನ: ಮೂವರು ವಶಕ್ಕೆ
‘ನನ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಗ್ರಾಮ ಪಂಚಾಯತಿ ಸದಸ್ಯ ಆಸೀಫ್ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಗುರುವಾರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೊರೊನಾ ವಿಶೇಷ ಸಭೆಯಲ್ಲಿ ಟಾಸ್ಕ್ಪೋರ್ಸ್ ಸಮಿತಿಗೆ ಸದಸ್ಯರ ವಿರುದ್ಧ ಲಿಖಿತ ದೂರು ನೀಡಿದ್ದರು.
ಈ ಕುರಿತು ಗ್ರಾಮ ಪಂಚಾಯತಿ ಟಾಸ್ಕ್ಪೋರ್ಸ್ ಸಮಿತಿ ಹಾಗೂ ಪೋಲಿಸರು ವಿಚಾರಣೆ ನಡೆಸಿ ಗ್ರಾಮ ಪಂಚಾಯಿತಿ ಸದಸ್ಯನಿಗೆ ಬುದ್ಧಿಮಾತು ಹೇಳಿ ತಪ್ಪೋಪ್ಪಿಗೆ ಪತ್ರ ಬರೆಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದರು.
ಕೊರೊನಾ ವೃರಸ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಹಾಗೂ ನಾಗರಿಕರ ಅರೋಗ್ಯದ ಕುರಿತು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತರ ಹಾಗೂ ರಕ್ಷಣಾ ಇಲಾಖೆಯ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ನಡೆದುಕೊಂಡು ಏಪ್ರಿಲ್ 14ರ ವರೆಗೆ ದೇಶವ್ಯಾಪ್ತಿ ಇರುವ ಲಾಕ್ಡೌನ್ ಕರೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಪಿಡಿಒ ಚಂದ್ರಶೇಖರ್ ಹಾಗೂ ಪಿಎಸ್ಐ ಪಾರ್ವತಿ ಬಾಯಿ ಜಂಟಿಯಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.