
ತುಮರಿ: ನಾಡಿನ ಭಕ್ತರ ಆರಾಧ್ಯ ದೇವತೆ ಸಿಗಂದೂರು ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಬುಧವಾರ ವಿಧ್ಯುಕ್ತವಾಗಿ ಆರಂಭಗೊಂಡಿತು. ಶರಾವತಿ ಹಿನ್ನೀರಿನಲ್ಲಿ ಮುಳುಗಿರುವ ಸೀಗೇ ಕಣಿವೆಯಲ್ಲಿ ನವಚಂಡಿಕಾ ಹವನ ಸೇರಿದಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದವು.
ಮೂಲಸ್ಥಾನ ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿ ಬೆಳಗಿಸುವ ಸಾಂಪ್ರದಾಯಿಕ ಆಚರಣೆಯ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಮಹೋತ್ಸವಕ್ಕೆ ಚಾಲನೆ ನೀಡಿದರು.
ಸೀಗೇ ಕಣಿವೆಯಲ್ಲಿ ಪ್ರಾತಃಕಾಲದಿಂದಲೇ ನವಚಂಡಿಕಾ ಹವನ, ಚಂಡಿಕಾ ಹವನ ಸೇರಿದಂತೆ ಆನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಸಾರಗನಜಡ್ಡು ಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿದವು. ಸಂಕ್ರಾಂತಿ ಹಬ್ಬವು ಎಲ್ಲರಿಗೂ ಸಮೃದ್ಧಿಯನ್ನು ತರಲಿ ಎಂದು ಸ್ವಾಮೀಜಿ ಹಾರೈಸಿದರು.
ಧರ್ಮ ಜ್ಯೋತಿ ಹಾಗೂ ಉತ್ಸವ ಮೂರ್ತಿ ಸೀಗೇ ಕಣಿವೆಯಿಂದ ಹೊರಟು 3 ಕಿಲೋ ಮೀಟರ್ ಸಾಗಿತು. ಮಾರ್ಗದುದ್ದಕ್ಕೂ ಬಿಸಿಲಿನಲ್ಲೇ ಪೂರ್ಣ ಕುಂಭ ಹೊತ್ತ ಮಹಿಳೆಯರು, ವೀರಭದ್ರ ಕುಣಿತ, ಚಂಡೆ ಕುಣಿತ, ಕೋಲಾಟ, ಕರಡಿ ಕುಣಿತ, ನವಿಲು ಕುಣಿತ, ನಾದ ಸ್ವರ ಸೇರಿದಂತೆ ಹಲವು ಕಲಾ ತಂಡಗಳ ಕಲಾವಿದರು ಭಾಗವಹಿಸಿದ್ದವು.
ಜಾತ್ರೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ, ನಿರ್ದೇಶಕ ಶೀಕಾಂತ್ ಸೇರಿದಂತೆ ಆನೇಕ ಗಣ್ಯರು ದೇವಿ ದರ್ಶನ ಪಡೆದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವಿ ದರ್ಶನ ಪಡೆದು ಮುಡಿಗಂಧ ಪ್ರಸಾದ ಸ್ವೀಕರಿಸಿದರು.
ಸಿಗಂದೂರು ಸೇತುವೆಯನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸೇತುವೆ ಮೇಲೆ ಸೆಲ್ಫಿ ತೆಗೆದುಕೊಂಡು ಭಕ್ತರು ಸಂಭ್ರಮಿಸಿದರು.
ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಸರ್ಕಾರವು ಸೇತುವೆ ನಿರ್ಮಾಣ ಮಾಡಿದೆ. ಈ ಭಾಗದ ಜನರಿಗೆ ಸಿಗಂದೂರು ದೇವಿಯೇ ಚೈತನ್ಯಎಸ್. ರಾಮಪ್ಪ ಧರ್ಮಾಧಿಕಾರಿ
ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಇಲ್ಲಿನ ಜನ ಜಾನುವಾರು ಸಂತ್ರಸ್ತವಾದವು. ದೇವಿಯನ್ನು ಪುನಃ ಪ್ರತಿಷ್ಠಾಪಿಸಿದ್ದ ಹಿಂದೆ ಕ್ಷೇತ್ರದ ಧರ್ಮಾಧಿಕಾರಿಗಳ ಅವಿರತ ಶ್ರಮವಿದೆ.ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕಡೇನಂದಿಹಳ್ಳಿ ಮಠ
‘ಮೂಢನಂಬಿಕೆಗಳು ಸಮಾಜದ ಅಭಿವೃದ್ಧಿಗೆ ಮಾರಕ’ ಮೂಢನಂಬಿಕೆಗಳು ಸಮಾಜದ ಅಭಿವೃದ್ಧಿಗೆ ಮಾರಕವಾಗಿವೆ. ಇವುಗಳಿಂದ ಹೊರಬರದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಸ್ವಾರ್ಥ ಸಾಧನೆಗೆ ಜನಸಮೂಹವನ್ನು ಬಳಸಿಕೊಳ್ಳುವ ಪಟ್ಟಭದ್ರರು ಹೆಣೆದಿರುವ ಈ ಕುಟಿಲ ತಂತ್ರಗಳಿಂದ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಶೇಷಪ್ಪ ನಾಯ್ಕ ವೇದಿಕೆಯಲ್ಲಿ ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನವನು ಭಕ್ತಿಯ ಪರಾಕಾಷ್ಠೆಯ ನಡುವೆ ಮೌಢ್ಯದತ್ತ ಸಾಗುವುದು ಸರಿಯಲ್ಲ. ಮೂಢನಂಬಿಕೆ ಬಿಡಲು ಪ್ರಯತ್ನಿಸಬೇಕು. ಸಿಗಂದೂರು ದೇವಸ್ಥಾನ ಎಲ್ಲರ ಒಳಗೊಳ್ಳುವಿಕೆ ಮೂಲಕ ಸರ್ವ ಧರ್ಮದ ಆರಾಧ್ಯ ಕೇಂದ್ರವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸ ತಂದಿದೆ ಎಂದರು. ‘ನಾಡಿಗಾಗಿ ಮನೆ ಭೂಮಿ ಕಳೆದುಕೊಂಡ ನೊಂದವರ ವಿರುದ್ಧವೇ ಬಲಾಢ್ಯ ಶಕ್ತಿಗಳು ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ಧರ್ಮಾಧಿಕಾರಿ ಎಸ್. ರಾಮಪ್ಪ ಅಭಿಪ್ರಾಯಪಟ್ಟರು. ಅರಣ್ಯ ಜೀವ ವೈವಿಧ್ಯ ಹೆಸರಿನಲ್ಲಿ ದಮನಿತ ಸಮುದಾಯಗಳ ಧ್ವನಿ ಆಡಗಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಚಂದ್ರಮೂರ್ತಿ ಹೆಸಿಗೆ ಕಲಸೆ ಚಂದ್ರಪ್ಪ ಹೊಳೆಯಪ್ಪ ಅನಿತಾ ಕುಮಾರಿ ದೇವಸ್ಥಾನದ ಕಾರ್ಯದರ್ಶಿ ರವಿ ಕುಮಾರ್ ಎಚ್.ಆರ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.