ADVERTISEMENT

ಲೋಕಪಾಲ ಜಾರಿಗೆ ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 14:33 IST
Last Updated 4 ಸೆಪ್ಟೆಂಬರ್ 2018, 14:33 IST
   

ಶಿವಮೊಗ್ಗ:ಸುಪ್ರಿಂಕೋರ್ಟ್‌ ನಿರ್ದೇಶನದಂತೆ ಕೇಂದ್ರ ಸರ್ಕಾರ ತಕ್ಷಣವೇ ಲೋಕಪಾಲ ನೇಮಿಸಬೇಕು. ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿರುವ ಸಿಬಿಐ ನಿರ್ದೇಶಕರನ್ನು ಬದಲಿಸಬೇಕು ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಎಸ್‌.ಆರ್. ಹಿರೇಮಠ ಒತ್ತಾಯಿಸಿದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ತಿದ್ದುಪಡಿ ಹಿಂಪಡೆಯಬೇಕು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಜನಾರ್ದನ ರಡ್ಡಿ ಮತ್ತು ಅವರ ಸಂಗಡಿಗರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆಯುತ್ತಿರುವ ಅಕ್ರಮ ಕಲ್ಲುಗಾರಿಕೆ, ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಮಲೆನಾಡಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಸಮಾಜಸೇವಕರಿಗೆ ಕಿರುಕುಳ ನೀಡಲಾಗುತ್ತಿದೆ. ಅವರಿಗೆ ರಕ್ಷಣೆ ನೀಡಬೇಕು. ಪಶ್ಚಿಮಘಟ್ಟ ಪ್ರದೇಶದ ಹೊಸನಗರ ತಾಲ್ಲೂಕಿನಲ್ಲಿ ಗಣಿಗಾರಿಕೆ ಪರಿಸರ ಸೂಕ್ಷ್ಮ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪಶ್ಚಿಮಘಟ್ಟದ ಜೀವ ಸಂಕುಲ ನಾಶದತ್ತ ಸಾಗಿದೆ. ಜಿಲ್ಲೆಯ 11ಸಾವಿರ ಎಕರೆ ಮೀಸಲು ಅರಣ್ಯ ಭೂಮಾಲೀಕರಿಗೆ ಹಂಚಿಕೆಯಾಗಿದೆ ಎಂದು ಆರೋಪಿಸಿದರು.

ADVERTISEMENT

‘ಗಿರೀಶ್ ಆಚಾರಿ ವಿರುದ್ದ ದಾಖಲಾದ ಎಲ್ಲ ದೂರುಗಳನ್ನು ವಾಪಸ್ ಪಡೆಯಬೇಕು. ದಶಕಗಳಿಂದ ನಡೆಯುತ್ತಿರುವ ಅಕ್ರಮ ಕಲ್ಲು ಮತ್ತು ಮರಳುಗಾರಿಕೆ ನಿಲ್ಲಿಸಬೇಕು. ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಜನಸಂಗ್ರಾಮ್ ಪರಿಷತ್ ಕಾರ್ಯಕರ್ತರಾದ ಗಿರೀಶ್ ಆಚಾರಿ, ಜಯಲಕ್ಷ್ಮಿ ಗಂಗಾಧರ್, ಧನ್ಯಕುಮಾರ್, ಉಮಾ ಧನ್ಯಕುಮಾರ್, ಆನಂದ್, ವೀರೇಂದ್ರ ಅವರಿಗೆ ಕಾನೂನಿನ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ಜನಸಂಗ್ರಾಮ ಪರಿಷತ್‌ನ ರಾಘವೇಂದ್ರ ಕುಷ್ಟಗಿ ಮಾತನಾಡಿ, ‘ಪಶ್ಚಿಮಘಟ್ಟದಲ್ಲಿ ಬಲಾಢ್ಯರು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಪರಿಸರ ನಾಶಪಡಿಸುತ್ತಿದ್ದಾರೆ. ಜಿಲ್ಲೆಯ ಜನ ಎಚ್ಚೆತ್ತುಕೊಳ್ಳದಿದ್ದರೆ ಕೇರಳ, ಕೊಡಗಿಗೆ ಬಂದಂತಹ ಆಪತ್ತು ಶಿವಮೊಗ್ಗ ಜಿಲ್ಲೆಗೂ ಎದುರಾಗುವ ಅಪಾಯವಿದೆ’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ ಮುಖಂಡರಾದ ಜಾನ್‌ವೆಸ್ಲಿ, ಪ್ರತಿಮಾ ನಾಯಕ್, ವಾಮದೇವಗೌಡ ಹಾಲಘಟ್ಟ, ಸುನಿತಾ, ಜಯಲಕ್ಷ್ಮಿ ಗಂಗಾಧರ್, ಮೀರಾ ಕುಷ್ಟಗಿ, ಶಿವಾನಂದ ಕುಗ್ವೆ, ಗಿರೀಶ್ ಆಚಾರ್, ಟಿ.ಆರ್. ಕೃಷ್ಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.