ಪಾವಗಡ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನಾದ್ಯಂತ ಮನೆಗಳು ಬಿದ್ದಿವೆ. ಸಾಕಷ್ಟು ಬೆಳೆ ನಷ್ಟವಾಗಿದೆ.
ಗುರುವಾರ ರಾತ್ರಿ ನಾಗಲಮಡಿಕೆ ಹೋಬಳಿಯ ಶ್ರಿರಂಗಪುರ ತಾಂಡಾದ ಗೋವಿಂದನಾಯ್ಕ ಅವರ ಮನೆಯ ಗೋಡೆ ಕುಸಿದು, 22 ಕುರಿಗಳು ಮೃತಪಟ್ಟಿವೆ. ಅಂದಾಜು ₹3 ಲಕ್ಷ ನಷ್ಟವಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಕೆ.ಆರ್. ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು. ಕೊಡಮಡಗು ಗ್ರಾಮದ ವೆಂಕಟೇಶಪ್ಪ ಅವರ ಮನೆಯ ಗೋಡೆ ಕುಸಿದು 6 ಮೇಕೆಗಳು ಸಾವನ್ನಪ್ಪಿವೆ.
ಮಳೆಯಿಂದಾಗಿ ಈವರೆಗೆ ತಾಲ್ಲೂಕಿನಾದ್ಯಂತ 34 ಮನೆಗಳು ಕುಸಿದಿವೆ. ಮನೆ ಕಳೆದುಕೊಂಡವರು ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಪಟ್ಟಣದ 22ನೇ ವಾರ್ಡ್ನ ಶ್ರೀನಾಥ್ ಅವರಿಗೆ ಸೇರಿದ ಕಡಲೆಕಾಯಿ ಮಿಲ್ ಗೋಡೆ ಕುಸಿದಿದ್ದು, ಭಾರಿ ಅನಾಹುತ ತಪ್ಪಿದೆ. ಗೋಡೆ ಮನೆಗಳ ಮೇಲೆ ಬಿದ್ದಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು.
ಪಟ್ಟಣದ ಅಗಸರಕುಂಟೆ ಕೋಡಿಬಿದ್ದಿದ್ದು, ಕುಂಟೆ ಬಳಿಯ ಮನೆಗಳಿಗೆ ನೀರು ನುಗ್ಗಿದೆ.
ನಾಗಲಮಡಿಕೆಯ ಉತ್ತರ ಪಿನಾಕಿನಿ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ. 500 ವರ್ಷ ಇತಿಹಾಸವಿರುವ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದ ಅಡುಗೆ ಶಾಲೆಯ ಗೋಡೆ ಬಿದ್ದಿದೆ. ಗೋಪುರ ಶಿಥಿಲಾವಸ್ಥೆ ತಲುಪಿದ್ದು, ಸಂಪೂರ್ಣ ದೇಗುಲ ಸೂರುತ್ತಿದೆ. ಅನಾಹುತ ಸಂಭವಿಸುವ ಮುನ್ನ ಸರ್ಕಾರ ದೇಗುಲ ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಗುಂಡಾರ್ಲ ಹಳ್ಳಿ ಕೆರೆ ಕಟ್ಟೆ ಒಡೆದು ಹೋಗಿದ್ದು ಕೆರೆಯಿಂದ ನೀರು ಹೊರಹೋಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.