ADVERTISEMENT

ತುಮಕೂರು | ಸಾಮಾಜಿಕ ಜಾಲತಾಣಗಳ ಸಂಚಾಲಕನ ಬಂಧನ: ಕಾಂಗ್ರೆಸ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 5:55 IST
Last Updated 27 ಜೂನ್ 2020, 5:55 IST
ಫೇಸ್‌ಬುಕ್‌ನಲ್ಲಿ ಅಜಯ್ ಕುಮಾರ್ ಗಾಲಿ ಪ್ರಕಟಿಸಿದ್ದ ಬರಹ
ಫೇಸ್‌ಬುಕ್‌ನಲ್ಲಿ ಅಜಯ್ ಕುಮಾರ್ ಗಾಲಿ ಪ್ರಕಟಿಸಿದ್ದ ಬರಹ   

ತುಮಕೂರು: ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ಪ್ರಕಟಿಸಿದ ಆರೋಪದ ಮೇಲೆ ಶಿರಾ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ನಗರ ಸಂಚಾಲಕ ಅಜಯ್ ಕುಮಾರ್ ಗಾಲಿ ಅವರನ್ನು ಶಿರಾ ಪೊಲೀಸರು ಬಂಧಿಸಿರುವುದಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಅಜಯ್ ಕುಮಾರ್ ಗಾಲಿ ತನ್ನ ಫೇಸ್‌ಬುಕ್‌ನಲ್ಲಿ ‘ಜೈಹೋ ಚೀನಾ, ಜೈ ಹೋ ಪಾಕಿಸ್ಥಾನ, ಇಂಡಿಯನ್ ಆರ್ಮಿ ಮೈ ಫೂಟ್’ ಎಂದು ಬರೆದುಕೊಂಡಿದ್ದಾನೆ. ಈ ಹಿಂದೆ ಈತ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ತಲೆಬಾಗಿರುವಂತೆ ಚಿತ್ರ ಪ್ರಕಟಿಸಿದ್ದ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಬಿಂಬಿಸಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ಮತ್ತು ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾನೆ. ತಕ್ಷಣ ಈತನನ್ನು ಬಂಧಿಸಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಕೋರಿ ಬಿಜೆಪಿ ಶಿರಾ ನಗರ ಘಟಕದ ಅಧ್ಯಕ್ಷ ವಿಜಯರಾಜು ಪೊಲೀಸರಿಗೆ ದೂರು ನೀಡಿದ್ದರು.

ಗಾಲಿ‌ಯಾವುದೇ ತಪ್ಪು ಮಾಡಿಲ್ಲ. ಯಾರೋ ಚಿತ್ರ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಅಜಯ್ ಕುಮಾರ್ ಗಾಲಿ ನಿರಪರಾಧಿ ಯಾವುದೇ. ಅಮಾಯಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆತನ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ್ದಾರೆ.‌ ಈ ಬಗ್ಗೆ ನಾವು ಸಹ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ‌ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.‌

ADVERTISEMENT

ಈ ಸಂಬಂಧ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರನ್ನು ಭೇಟಿ ಮಾಡಿ, ಗಾಲಿ ಬಿಡುಗಡೆಗೆ ಆಗ್ರಹಿಸಿದ್ದಾರೆ. ಇದು ಶಿರಾ ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವೈಷಮ್ಯಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.