ADVERTISEMENT

ದೇಗುಲದಿಂದ ದಲಿತ ದಂಪತಿ ಹೊರಕ್ಕೆ: 7 ಮಂದಿ ವಿರುದ್ಧ ಪ್ರಕರಣ ದಾಖಲು; ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 23:30 IST
Last Updated 21 ಫೆಬ್ರುವರಿ 2026, 23:30 IST
ತುರುವೇಕೆರೆ ತಾಲ್ಲೂಕು ಗೋಣಿತುಮಕೂರಿನ ಅರಸಮ್ಮ ದೇಗುಲದಲ್ಲಿ ಪೊಲೀಸರು ಹಾಗೂ ತಹಶೀಲ್ದಾರ್ ಗ್ರಾಮಸ್ಥರಗೊಂದಿಗೆ ಶಾಂತಿ ಸಭೆ ನಡೆಸಿದರು
ತುರುವೇಕೆರೆ ತಾಲ್ಲೂಕು ಗೋಣಿತುಮಕೂರಿನ ಅರಸಮ್ಮ ದೇಗುಲದಲ್ಲಿ ಪೊಲೀಸರು ಹಾಗೂ ತಹಶೀಲ್ದಾರ್ ಗ್ರಾಮಸ್ಥರಗೊಂದಿಗೆ ಶಾಂತಿ ಸಭೆ ನಡೆಸಿದರು   

ತುರುವೇಕೆರೆ: ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದ ಆದಿಶಕ್ತಿ ಅರಸಮ್ಮ ದೇವಾಲಯ ಪ್ರವೇಶಿಸಿದ್ದ ಪರಿಶಿಷ್ಟ ಜಾತಿಗೆ ಸೇರಿದ ನವದಂಪತಿಯನ್ನು ಹೊರಗೆ ಕಳುಹಿಸಲಾಗಿದೆ.

ಕಳೆದ ವಾರ ಮದುವೆಯಾಗಿದ್ದ ಪುನೀತ್‌ ಹಾಗೂ ಪಂಕಜ ದಂಪತಿ ಗುರುವಾರ (ಫೆ. 19) ಅರಸಮ್ಮ ದೇಗುಲಕ್ಕೆ ಪೂಜೆ ಸಲ್ಲಿಸಲು ಹೋಗಿದ್ದರು. ದೇವಾಲಯದಲ್ಲಿದ್ದ ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮಾ ಹಾಗೂ ಇತರರು ಆಕ್ಷೇಪ ಎತ್ತಿದ್ದಾರೆ. ದಂಪತಿಯನ್ನು ದೇಗುಲದಿಂದ ಹೊರಗೆ ಕಳುಹಿಸಿದ್ದಾರೆ ಎಂದು ತುರುವೇಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

‘ನನ್ನ ತಂಗಿ, ಬಾವನ ಜತೆ ದೇವಸ್ಥಾನಕ್ಕೆ ಹೋಗಿದ್ದೆ. ಆಗ ದೇವಾಲಯದಲ್ಲಿ ಇದ್ದವರು ನಮ್ಮನ್ನು ತಡೆದರು. ನೀವು ಹಟ್ಟಿಯವರು, ಒಳಗಡೆ ಬಂದ ತಪ್ಪಿಗೆ ಪುಣ್ಯ ಮಾಡಿಸಬೇಕಾಗುತ್ತದೆ ಎಂದು ಅವಮಾನಿಸಿದರು. ಹೊರಗೆ ಹೋಗುವಂತೆ ಬಲವಂತ ಮಾಡಿದರು. ಪೂಜಾ ಸಾಮಗ್ರಿಯನ್ನು ಹಿಂದಿರುಗಿಸದೆ ದೇವಾಲಯದಿಂದ ಕಳುಹಿಸಿದರು’ ಎಂದು ಗೋಣಿ ತುಮಕೂರಿನ ಜಗದೀಶ್‌ ದೂರಿನಲ್ಲಿ ತಿಳಿಸಿದ್ದಾರೆ. 

ADVERTISEMENT

‘ಉದ್ದೇಶಪೂರ್ವಕವಾಗಿ ಜಾತಿ ಹೆಸರಿನಲ್ಲಿ ಅವಮಾನಿಸಿದ್ದಾರೆ. ಸಾರ್ವಜನಿಕವಾಗಿ ಅವಮಾನಿಸಿ, ಮಾನಸಿಕವಾಗಿ ತೊಂದರೆ ನೀಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೋರಿದ್ದಾರೆ. ದೂರು ಆಧರಿಸಿ ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮುಖ್ಯ ಆರೋಪಿ ನಾರಾಯಣಪ್ಪ ಎಂಬುವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ದಂಪತಿ ದೇಗುಲ ಪ್ರವೇಶಿಸಿದಾಗ ಅಲ್ಲಿದ್ದ ನಾರಾಯಣಪ್ಪ ಎಂಬುವರು ಮೈಮೇಲೆ ದೇವರು ಬಂದಂತೆ ನಟಿಸಿದರು ಎಂದು ಹೇಳಲಾಗಿದೆ. ಆ ವೇಳೆ, ‘ಇವರನ್ನು (ಪರಿಶಿಷ್ಟ ಜಾತಿ ದಂಪತಿ) ಒಳಗೆ ಬಿಟ್ಟವರು ಯಾರು? ಆಚೆ ಹೋಗು, ನಡೀ ಆಚೆ’ ಎಂದು ದಂಪತಿಯನ್ನು ಗದರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಷಯ ತಿಳಿಯುತ್ತಲೇ ಗ್ರಾಮಕ್ಕೆ ದೌಡಾಯಿಸಿದ ಡಿವೈಎಸ್‌ಪಿ ಓಂಪ್ರಕಾಶ್, ತಹಶೀಲ್ದಾರ್ ಎಂ.ಎನ್.ಕುಂಞ ಅಹಮದ್ ಶುಕ್ರವಾರ ರಾತ್ರಿ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿದರು.

‘ದೇವಾಲಯವನ್ನು ಪ್ರವೇಶಿಸಲು ಎಲ್ಲ ಜಾತಿ, ಜನಾಂಗದವರಿಗೂ ಮುಕ್ತ ಅವಕಾಶ ನೀಡಬೇಕು’ ಎಂದು ಸಭೆಯಲ್ಲಿ ತಾಕೀತು ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.