ತುಮಕೂರು: ಮಳೆ ಕಾರಣದಿಂದ ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬಾರದೆ ಕಳೆದ ವಾರ ಬೆಲೆ ದಿಢೀರ್ ಏರಿಕೆಯಾಗಿತ್ತು. ಆದರೆ ಈ ವಾರ ಬೆಲೆ ಸ್ವಲ್ಪ ತಗ್ಗಿದ್ದು ಕೆ.ಜಿ.ಗೆ ₹30ರಂತೆ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿನ ಭಾರ ತುಸು ತಗ್ಗಿದೆ.
ಶುಕ್ರವಾರದವರೆಗೂ ಟೊಮೆಟೊ ಬೆಲೆ ₹40 ಇತ್ತು. ಶನಿವಾರ ₹ 30ಕ್ಕೆ ಇಳಿಕೆಯಾಗಿದೆ. ಕೋವಿಡ್–19, ಆಷಾಢ ಮಾಸದ ಪರಿಣಾಮ ಮಾರುಕಟ್ಟೆಯನ್ನೂ ಬಾಧಿಸುತ್ತಿದೆ. ತರಕಾರಿ, ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲವಾಗಿದೆ. ಕೆಲವು ವಾರಗಳಿಂದೀಚೆಗೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಈ ವಾರವೂ ಅದೇ ಸ್ಥಿತಿ ಮುಂದುವರಿಯುವ ಲಕ್ಷಣಗಳಿವೆ ಎನ್ನುತ್ತಾರೆ ತರಕಾರಿ ಮಾರುಕಟ್ಟೆಯ ಗಿರೀಶ್.
ತೆಂಗಿನಕಾಯಿ ಒಂದಕ್ಕೆ ₹20ರಿಂದ ₹30 ಇದ್ದರೆ, ನಿಂಬೆ ಹಣ್ಣಿನ ಗಾತ್ರಕ್ಕೆ ತಕ್ಕಂತೆ ₹3ರಿಂದ ₹5ರವರೆಗೆ ಬೆಲೆ ಇದೆ. ನೇರಳೆ ಹಣ್ಣಿನ ಆವಕವೂ ಮುಗಿದಿದೆ. ಹಾಪ್ಕಾಮ್ಸ್ಗೆ ಸ್ಥಳೀಯವಾಗಿ ಕಿತ್ತಳೆ ಹಣ್ಣು ಬರುತ್ತಿಲ್ಲ. ಈಜಿಫ್ಟ್ನಿಂದ ಬರುತ್ತಿದೆ. ಮರಸೇಬು ಮಾರುಕಟ್ಟೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಸೇಬಿನ ವ್ಯಾಪಾರ ಹೆಚ್ಚಾಗಲಿದೆ ಎನ್ನುತ್ತಾರೆ ಹಾಪ್ಕಾಮ್ಸ್ ಸೇಲ್ಸ್ಮ್ಯಾನ್ ಟಿ.ಆರ್.ನಾಗರಾಜು.
ಏರಿಳಿತ ಕಂಡ ತರಕಾರಿ: ನುಗ್ಗೆಕಾಯಿ ಕೆ.ಜಿ.ಗೆ ₹40ರಿಂದ ₹44ಕ್ಕೆ ಏರಿಕೆಯಾಗಿದೆ. ಕ್ಯಾಪ್ಸಿಕಂ ₹60ರಿಂದ ₹10 ಜಿಗಿದು ₹70ಕ್ಕೆ ಏರಿಕೆ ಕಂಡಿದೆ. ಬೀನ್ಸ್ ₹20ರಿಂದ ₹26ಕ್ಕೆ ಹೆಚ್ಚಳವಾಗಿದೆ. ಆಷಾಢ ಕಳೆದ ನಂತರ ತರಕಾರಿ ದರದಲ್ಲಿ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕೋಳಿ ಬೆಲೆ ಸ್ಥಿರ: ಕಳೆದ ವಾರಕ್ಕೆ ಹೋಲಿಸಿದರೆ ಕೋಳಿ ಮಾಂಸದ ಬೆಲೆ ಕಡಿಮೆಯಾಗಿಲ್ಲ. ಕೆ.ಜಿ ₹180ಕ್ಕೆ ಮಾರಾಟವಾಗುತ್ತಿದೆ. ಎಳೆಯ ಕುರಿ ಮಾಂಸದ ಬೆಲೆ ಕೆ.ಜಿ ₹600, ಸಾಧಾರಣ ಮಟನ್ ₹ 500ಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ನಿಮ್ರಾ ಚಿಕನ್, ಮಟನ್ ಸ್ಟಾಲ್ನ ಶಾಹಿದ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.