ಸಹಕಾರ ಸಚಿವ ಕೆ.ಎನ್. ರಾಜಣ್ಣ
-ಪ್ರಜಾವಾಣಿ ಚಿತ್ರ
ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಮತ ಕಳವು ನಡೆದಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರು ಕಣ್ಣುಮುಚ್ಚಿ ಕುಳಿತಿದ್ದರೇ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮತ ಕಳವಿನ ವಿಚಾರ ಮಾತನಾಡಲು ಹೋದರೆ ಮಾತನಾಡಬೇಕಾಗುತ್ತದೆ. ಅದು ಬೇರೆ–ಬೇರೆ ಆಗುತ್ತದೆ. ಲೋಕಸಭೆ ಚುನಾವಣೆ ನಡೆದದ್ದು, ಮತಪಟ್ಟಿ ಸಿದ್ಧಪಡಿಸಿದ್ದು, ನಮ್ಮ ಸರ್ಕಾರದ ಅವಧಿಯಲ್ಲೇ. ಎಲ್ಲರೂ ಆಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದರು’ ಎಂದರು.
‘ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇದ್ದೇವಲ್ಲ ಎಂಬ ಬಗ್ಗೆ ನಾಚಿಕೆ ಆಗಬೇಕು. ನಮ್ಮ ಕಣ್ಣು ಮುಂದೆ ಅಕ್ರಮಗಳು ನಡೆದಿರುವುದನ್ನು ನೋಡಿದರೆ ನಮಗೆ ಅವಮಾನ ಆಗಬೇಕು. ಆಗ ಸುಮ್ಮನೆ ಇದ್ದು, ಈಗ ಹೇಳುತ್ತಿದ್ದೇವೆ. ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದೆ ಎಚ್ಚರಿಕೆಯಿಂದ ಇರುತ್ತೇವೆ’ ಎಂದು ತಿಳಿಸಿದರು.
‘ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ವಿವಿಧ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸ್ವಾಮೀಜಿಗಳು ಹೇಳಿದಂತೆ ನಡೆಯುವಂತಿದ್ದರೆ ರಾಜಕಾರಣಿಗಳು ಏಕೆ ಇರಬೇಕು. ಎಲ್ಲ ಸ್ವಾಮೀಜಿಗಳು ಸೇರಿಕೊಂಡು ತೀರ್ಮಾನ ಮಾಡಬಹುದಿತ್ತಲ್ಲವೆ? ಸ್ವಾಮೀಜಿಗಳು ಹೇಳಿದಂತೆ ರಾಜಕಾರಣ ಮಾಡಲಾಗುತ್ತದೆ? ಅದೇ ರೀತಿ ನಡೆಯುತ್ತದೆಯೆ?’ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.